ಮೈಸೂರು: ಮೈಸೂರು ತಾಲೂಕಿನ ಆಯರಹಳ್ಳಿಯ ದ್ಯಾವಣ್ಣ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ 3 ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಈ ಪೈಕಿ ಒಂದು ಕಪ್ಪು ಚಿರತೆ ಮರಿಯಾಗಿದೆ. ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಕಟಾವು ಮಾಡುವ ವೇಳೆ ಈ ಮರಿಗಳು ಪತ್ತೆಯಾಗಿವೆ ಎಂದು ದ್ಯಾವಣ್ಣ ತಿಳಿಸಿದ್ದು, ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮರಿಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್ನು ಅರಣ್ಯ ಅಧಿಕಾರಿಗಳು ಮರಿಗಳನ್ನೇನೋ ವಶಕ್ಕೆ ಪಡೆದಿದ್ದಾರೆ. ಆದರೆ ಮರಿಗಳ ತಾಯಿಯದ್ದೇ ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ. ಹೌದು, ತಾಯಿ ಚಿರತೆ ಮರಿಗಳು ಇದ್ದ ಸ್ಥಳಕ್ಕೆ ಹಾಲುಣಿಸಲು ಬರಲಿದ್ದು ತನ್ನ ಮರಿಗಳು ಕಾಣದಿದ್ದಾಗ ತೀವ್ರ ಆಕ್ರೋಶಗೊಳ್ಳುವ ಸಾಧ್ಯತೆ ಇದೆ.
ಇದರಿಂದ ಚಿರತೆ ಅತಿರೇಕದಿಂದ ವರ್ತಿಸಿ ಹಾನಿಯುಂಟುಮಾಡುವ ಸಾಧ್ಯತೆಗಳಿದ್ದು, ಅರಣ್ಯ ಅಧಿಕಾರಿಗಳು ತಾಯಿ ಚಿರತೆಯನ್ನು ಸೆರೆ ಹಿಡಿಯಲು ಯೋಜನೆ ರಚಿಸಿದ್ದಾರೆ ಎಂದು ತಿಳಿದುಬಂದಿದೆ.





