Mysore
29
overcast clouds

Social Media

ಭಾನುವಾರ, 12 ಜುಲೈ 2026
Light
Dark

ಗೃಹಲಕ್ಷ್ಮೀಗೆ ಶಾಸಕರ ವೇತನ ಬಿಟ್ಟುಕೊಟ್ಟ ಬಸವರಾಜ ರಾಯರೆಡ್ಡಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಗೆ ತಮ್ಮ ಶಾಸಕ ಸ್ಥಾನದ ವೇತನವನ್ನು ಮಾಜಿ ಸಚಿವ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಇತರೆ ಶಾಸಕರು ಹಾಗೂ ಸಚಿವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಮಾದರಿಯಾಗಿದ್ದಾರೆ.

ರಾಜ್ಯ ಸರ್ಕಾರ ಇಷ್ಟೊಂದು ದೊಡ್ಡ ಯೋಜನೆಯನ್ನು ಜಾರಿಗೆ ತಂದಿದೆ. ಆದ್ದರಿಂದ ಸರ್ಕಾರದೊಂದಿಗೆ ಕೈ ಜೋಡಿಸುವ ಪ್ರಯುಕ್ತ ತಮ್ಮ ಪ್ರತಿ ತಿಂಗಳ ಶಾಸಕರ ವೇತನವನ್ನು ಗೃಹಲಕ್ಷ್ಮೀ ಯೋಜನೆಗೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ ರಾಯರೆಡ್ಡಿ ಅವರು, ಈ ಹಿಂದೆಯೂ ನಾನು ಶಾಸಕ ಸ್ಥಾನದ ವೇತನವನ್ನು ಪಡೆದಿಲ್ಲ. ಆಗಲೂ ಬೇರೆ ಯೋಜನೆಗೆ ಬಿಟ್ಟುಕೊಟ್ಟಿದ್ದೆ, ಈಗ ಗೃಹಲಕ್ಷ್ಮೀ ಯೋಜನೆಗೆ ನನ್ನ ವೇತನ ಬಿಟ್ಟುಕೊಡಲು ನಿರ್ಧರಿಸಿ ಪತ್ರ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಬಸವರಾಜ ರಾಯರೆಡ್ಡಿ ಅವರು ತೆಗೆದುಕೊಂಡ ನಿರ್ಧಾರವನ್ನು ಕಾಂಗ್ರೆಸ್‌ನ ಇತರೆ ಶಾಸಕರು ಹಾಗೂ ಸಚಿವರು ಅನುಸರಿಸುತ್ತಾರಾ ಎಂಬುದನ್ನು ನೋಡಬೇಕಿದೆ.

ಇನ್ನು, ಬರ ಅಥವಾ ಪ್ರವಾಹ ಪರಿಸ್ಥಿತಿ ಸೇರಿ ಕೆಲವು ಸಂದರ್ಭದಲ್ಲಿ ಶಾಸಕರು ಹಾಗೂ ಸಚಿವರು ತಮ್ಮ ಒಂದು ತಿಂಗಳ ವೇತನವನ್ನು ಸರ್ಕಾರಕ್ಕೆ ನೀಡಿರುವ ಉದಾಹರಣೆಗಳು ಹಲವು ಇವೆ. ಆದರೆ, ಶಾಸಕರ ಅವಧಿ ಇರುವ ತನಕ ತಮ್ಮ ಶಾಸಕ ಸ್ಥಾನದ ವೇತನವನ್ನು ಯೋಜನೆಯೊಂದಕ್ಕೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದುಕೊಟ್ಟಿರುವುದು ಅಪರೂಪ ಎಂತಲೇ ಹೇಳಬಹುದು.

ಶಾಸಕರಿಗೆ ಎಷ್ಟಿದೆ ಸಂಬಳ?

ಸದ್ಯ ಕರ್ನಾಟಕದಲ್ಲಿನ ಶಾಸಕರ ಮೂಲ ವೇತನ ಮಾಸಿಕ 40 ಸಾವಿರ ರೂ. ಇದೆ. ಇದರ ಜೊತೆ ಕ್ಷೇತ್ರ ಭತ್ಯೆ 60 ಸಾವಿರ ರೂ., ಕ್ಷೇತ್ರ ಪ್ರಯಾಣ ಭತ್ಯೆ 60,000 ರೂ. ಇದೆ. ತಮ್ಮ ಆಪ್ತ ಸಹಾಯಕರಿಗೆ ವೇತನ ಸೇರಿ ಇತರ ವೆಚ್ಚಗಳಿಗೆ 20,000 ರೂ., 5 ಸಾವಿರ ರೂ. ಅಂಚೆ ವೆಚ್ಚ ಹಾಗೂ ಫೋನ್‌ ಭತ್ಯೆಯಾಗಿ 20 ಸಾವಿರ ರೂ. ಅನ್ನು ಶಾಸಕರು ಪಡೆಯುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!