Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ರೋಹಿತ್ ಶರ್ಮಾ ಬದಲು 29ರ ಯುವಕನಿಗೆ ವೈಟ್‌ಬಾಲ್‌ ಕ್ಯಾಪ್ಟನ್ಸಿ ಕೊಡಿ ಎಂದ ರವಿ ಶಾಸ್ತ್ರಿ!

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜನೆಯ 2 ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ನಂತರ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ನಂತರ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯಗೆ ವೈಟ್ ಬಾಲ್ ಸ್ವರೂಪದ ನಾಯಕಪಟ್ಟ ಕಟ್ಟಬೇಕೆಂದು ಆಗ್ರಹಿಸಿದ್ದಾರೆ.

2021ರಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋಲು ಕಂಡ ನಂತರ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದರು. ಆಗ ರೋಹಿತ್ ಶರ್ಮಾಗೆ ಟಿ 20 ಸ್ವರೂಪದ ನಾಯಕಪಟ್ಟ ನೀಡಲಾಯಿತು. ಈಗ ಹಿಟ್ ಮ್ಯಾನ್ 3 ಸ್ವರೂಪದಲ್ಲೂ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದರೆ ಐಸಿಸಿ ಆಯೋಜನೆಯ ಏಷ್ಯಾ ಕಪ್, ಟಿ 20 ವಿಶ್ವಕಪ್ ಟೂರ್ನಿ ಹಾಗೂ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ತಮ್ಮ ನಾಯಕತ್ವದಲ್ಲಿ ಟ್ರೋಫಿ ಗೆಲ್ಲುವಲ್ಲಿ ಮುಗ್ಗರಿಸಿದ್ದಾರೆ.

ರೋಹಿತ್ ಶರ್ಮಾ ಈಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ, ಏಷ್ಯಾ ಕಪ್ ಟೂರ್ನಿ, ತವರು ಅಂಗಳದಲ್ಲಿ ಜರುಗಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಜಯಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈ ನಡುವೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಏಕದಿನ ವಿಶ್ವಕಪ್ ಟೂರ್ನಿ ಮುಗಿದ ನಂತರ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯಗೆ ವೈಟ್ ಬಾಲ್ (ಏಕದಿನ, ಟಿ 20)ಸ್ವರೂಪದ ನಾಯಕಪಟ್ಟ ನೀಡಬೇಕು ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ ನಾಯಕರಾಗಲಿ:
ದಿ ವೀಕ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ, ” ಟೆಸ್ಟ್ ಸ್ವರೂಪವು ಹಾರ್ದಿಕ್ ಪಾಂಡ್ಯಗೆ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಆದರೆ ಏಕದಿನ ವಿಶ್ವಕಪ್ ಟೂರ್ನಿ ಮುಗಿದ ತಕ್ಷಣ ಪಾಂಡ್ಯ ಟೀಮ್ ಇಂಡಿಯಾದ ವೈಟ್ ಬಾಲ್ ಸ್ವರೂಪಕ್ಕೆ ನಾಯಕರಾಗಬೇಕು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಹಜವಾಗಿಯೇ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ,” ಎಂದು ಹೇಳಿದ್ದಾರೆ.

2022 ರಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ ಗಳಿಂದ ಸೋತು ಅಭಿಯಾನ ಮುಗಿಸಿದ ನಂತರ ಚುಟುಕು ಸ್ವರೂಪದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೊಚ್ಚಲ ನಾಯಕತ್ವದಲ್ಲೇ ಗುಜರಾತ್ ಟೈಟನ್ಸ್ ಗೆ ಟ್ರೋಫಿ ಗೆದ್ದುಕೊಟ್ಟಿದ್ದರೆ, ಇತ್ತೀಚೆಗೆ ಮುಕ್ತಾಯಗೊಂಡ ಟೂರ್ನಿಯಲ್ಲೂ ತಂಡ ರನ್ನರ್ಸ್ಅಪ್ ಆಗಲು ಸಹಕರಿಸಿದ್ದಾರೆ ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ಪ್ರಶಂಸಿಸಿದ್ದಾರೆ.

ಸಂಜು ಸ್ಯಾಮ್ಸನ್ ಗೆ ಸ್ಥಾನ ಸಿಗಲಿ:
ದಿ ವೀಕ್ ನಡೆಸಿದ ಸಂದರ್ಶನದಲ್ಲಿ ರವಿಶಾಸ್ತ್ರಿ ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿ ಕುರಿತು ಪ್ರಸ್ತಾಪಿಸಿದ್ದು, ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗೆ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಸಿಗಲಿ ಎಂದು ಹೇಳಿದ್ದಾರೆ.

“ಸಂಜು ಸ್ಯಾಮ್ಸನ್ ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಲಿ, ಸಂಜು ಸ್ಯಾಮ್ಸನ್ ಅವರು ಉತ್ತಮ ಮ್ಯಾಚ್ ವಿನ್ನರ್ ಆಟಗಾರರಾಗಿದ್ದು, ಅವರು ಎಲ್ಲ ಸ್ವರೂಪದಲ್ಲೂ ಭಾರತ ತಂಡದಲ್ಲಿ ಸ್ಫೋಟಕ ಪ್ರದರ್ಶನ ನೀಡಿಯೇ ತಮ್ಮ ಕ್ರಿಕೆಟ್ ಜೀವನ ಮುಗಿಸಬೇಕು, ಇಲ್ಲದಿದ್ದರೆ ನನ್ನ ಮನಸ್ಸಿಗೆ ಬೇಸರ ಆಗುತ್ತದೆ.

ನಾನು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾಗ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಟೆಸ್ಟ್ ಪಂದ್ಯದಲ್ಲಿ ಆಡದಿದ್ದರೆ ನನಗೆ ಬೇಸರ ಆಗುತ್ತಿತ್ತು. ಆದರೆ ಈಗ ಅವರು ಆರಂಭಿಕನ ಸ್ಥಾನದಲ್ಲಿ ಆಡುತ್ತಿದ್ದಾರೆ. ರೋಹಿತ್ ಬಗ್ಗೆ ಹೊಂದಿದ್ದ ಭಾವನೆಯನ್ನು ನಾನು ಸಂಜು ಸ್ಯಾಮ್ಸನ್ ಬಗ್ಗೆ ಹೊಂದಿದ್ದೇನೆ,” ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!