Mysore
28
overcast clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸಭೆ, ಮಾತುಕತೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಕೇವಲ ಒಂದೇ ದಿನ ಬಾಕಿ ಇದೆ. ಈ ನಡುವಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಈ ಬಾರಿ ಬಹುಮತದ ಮೂಲಕ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದು, ನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಸಭೆ ಹಿನ್ನೆಲೆಯಲ್ಲಿ ಖರ್ಗೆಯವರ ನಿವಾಸಕ್ಕೆ ಡಿಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ. ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಅಧ್ಯಕ್ಷನಾಗಿ ನಿದ್ದೆ ಮಾಡಿಲ್ಲ, ನಿದ್ದೆ ಮಾಡಲು ಬಿಟ್ಟಿಲ್ಲ ಎಂದು ಹೇಳಿದರು.

ನನಗೆ ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ. ನನ್ನ ಸಂಖ್ಯೆ 141. ಎಕ್ಸಿಟ್ ಪೋಲ್​ನ ಸಂಖ್ಯೆ ಬಹಳ ಕಡಿಮೆ ಇದೆ. ನಮ್ಮ ಎಕ್ಸಿಟ್ ಪೋಲ್ ಸ್ಯಾಂಪಲ್ಸ್ ಹೆಚ್ಚಿದೆ. ಕಾಂಗ್ರೆಸ್ ಪರವಾಗಿ ದೊಡ್ಡ ಅಲೆ ಇದೆ. ಮೊದಲು ಹೆಚ್ಚು ತೋರಿಸಿದವರು 20 ಸೀಟ್ ಆಮೇಲೆ ಕಡಿಮೆ ತೋರಿಸಿದರು ಎಂದು ತಿಳಿಸಿದರು.

ಯಾವ ಕಾರಣಕ್ಕೂ ಸಂಖ್ಯೆ ಕಡಿಮೆಯಾಗುವುದಿಲ್ಲ. ನಿಚ್ಚಳವಾದ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ. ಬ್ಯಾಲೆಟ್ ಇಸ್ ಸ್ಟ್ರಾಂಗರ್ ದೆನ್ ದಿ ಬುಲೆಟ್. ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಾಗ ಜನ ಹೇಗೆ ಬುಲೆಟ್​ಗೆ ಹೆದರಲಿಲ್ಲವೋ, ಹಾಗೆ ಜನ ಈ ಬಾರಿ ಆಸೆ ಆಮಿಷಗಳಿಗೆ ಮನ್ನಣೆ ನೀಡಿಲ್ಲ. ನಾಳೆ ಒಂದು ಗಂಟೆ ಅಷ್ಟೊತ್ತಿಗೆ ಎಲ್ಲ ತೀರ್ಪು ಹೊರಬರಲಿದೆ ಎಂದರು.

ನು ಜೆಡಿಎಸ್​ ಪಕ್ಷದ ಜೊತೆಗಿನ ಮೈತ್ರಿಯ ಬಗ್ಗೆ ಮಾತನಾಡಿ, ಎಚ್ಡಿಕೆ ಏನು ಹೇಳುತ್ತಾರೆ, ಮಾಡುತ್ತಾರೆಂಬುದು ಗೊತ್ತಿಲ್ಲ. ಮೈತ್ರಿ ಬಗ್ಗೆ ಎಚ್​ಡಿಕೆ ಮಾತು ಗೊತ್ತಿಲ್ಲ. ಕುಮಾರಣ್ಣನ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು, ಹಾಗಾಗಿ ಮಾತನಾಡುತ್ತಾರೆ. ನಾನಂತೂ ಹೋರಾಟ ಮಾಡುವವನು, ಈಗಲೇ ರಿಟೈರ್ ಆಗುವವನಲ್ಲ. ಕೊನೆ ಉಸಿರು ಇರುವವರೆಗೂ ಹೋರಾಟ ಮಾಡುವವನು. ಬಂದು ನನ್ನ ಸೇರಿಕೊಳ್ಳಿ ಎಂದು ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಹೇಳುತ್ತೇನೆಂದು ಹೇಳಿದರು.

ರೆಸಾರ್ಟ್​ ರಾಜಕಾರಣ ಕುರಿತು ಪ್ರತಿಕ್ರಿಯಿಸಿ, ಎಷ್ಟೇ ನಂಬರ್ ಬಂದರೂ ಸರ್ಕಾರ ಮಾಡುತ್ತೇವೆಂದು ಹೇಳುತ್ತಾರಲ್ಲ, ಎಲ್ಲಾ ಪಕ್ಷದವರು ಅವರವರ ಶಾಸಕರನ್ನು ಹಿಡಿದಿಟ್ಟುಕೊಳುತ್ತಾರೆ. ಯಾವ ಅಧಿಕಾರ ಹಂಚಿಕೆಯ ಮಾತೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ಹೇಳುತ್ತಾರೋ ಹಾಗೆ ಕೇಳುತ್ತೇವೆ ಎಂದು ತಿಳಿಸಿದರು.

ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಕರ್ನಾಟಕದ 6.5 ಕೋಟಿ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಫಲಿತಾಂಶ ಹೊರಬೀಳುವವರೆಗೆ ನಾಳೆಯವರೆಗೆ ಕಾಯೋಣ. ಈಗಾಗಲೇ ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುತ್ತದೆ. ನಾವು ಕರ್ನಾಟಕದ ಜನರ ಸೇವೆ ಮಾಡುತ್ತೇವೆಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!