ಹಾಸನ: ಮಾಜಿ ಪ್ರದಾನಿ ಹೆಚ್ಡಿ ದೇವೇಗೌಡ ಅವರು ತೆರಳುತ್ತಿದ್ದ ಹೆಲಿಕಾಪ್ಟರ್ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರದ ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.
ಮೇಲೆ ಹಾರಿದ್ದ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಪೈಲೆಟ್ ಕೆಳಗಿಳಿಸಿದ್ದಾರೆ. ಬಳಿಕ ಸಮಸ್ಯೆ ಸರಿಪಡಿಸಿ ಮತ್ತೆ ತೆರಳಲಾಗಿದೆ. ಹೆಲಿಕಾಪ್ಟರ್ನಲ್ಲಿ ಹೆಚ್ಡಿ ದೇವೇಗೌಡ, JDS ರಾಜ್ಯಾಧ್ಯಕ್ಷ ಇಬ್ರಾಹಿಂ ಪ್ರಯಾಣಿಸಿದ್ದು, ಎಚ್.ಕೆ.ಕುಮಾರಸ್ವಾಮಿ ಪರ ಮತಯಾಚಿಸಿ ಸಕಲೇಶಪುರದಿಂದ ಅರಕಲಗೂಡಿಗೆ ತೆರಳುತ್ತಿದ್ದರು.
ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಿದ್ದ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್ಗೆ ಬಂದಿಳಿದಿದ್ದರು.
ಈ ವೇಳೆ, ಹೆಲಿಪ್ಯಾಡ್ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ಕೂಡಲೇ ಸಿಬ್ಬಂದಿ ಆರಿಸಿದ್ದು, ಸಂಭಾವ್ಯ ದುರಂತ ತಪ್ಪಿದೆ.





