Mysore
25
overcast clouds

Social Media

ಶುಕ್ರವಾರ, 03 ಜುಲೈ 2026
Light
Dark

ಜನರ ಸಂಕಷ್ಟಕ್ಕೆ ಬಾಯಿ ಬಿಡದ ಪ್ರಧಾನಿ, ಜಾತಿ-ಧರ್ಮ ವಿಷಯಕ್ಕೆ ಮಾತ್ರ ಮಾತನಾಡುತ್ತಾರೆ: ಪ್ರಿಯಾಂಕ ಗಾಂಧಿ

ಬೆಂಗಳೂರು: ರಾಜ್ಯದಲ್ಲಿ ಲೂಟಿ ನಡೆಯುವಾಗ ಪ್ರಧಾನಿ ಕಣ್ಣು ಮುಚ್ಚಿಕುಳಿತುಕೊಂಡು ಕನಸು ಕಾಣುತ್ತಿದ್ದರು. ಸರ್ವಜ್ಞಾನಿ, ಸರ್ವಾಂತರ್ಯಾಮಿ ಪ್ರಧಾನಿಗೆ ರಾಜ್ಯದಲ್ಲಿ ನಡೆಯುತ್ತಿರುವ ಲೂಟಿ ತಿಳಿಯಲಿಲ್ಲವೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಡೆದ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು,ಶೇ.40ರಷ್ಟು ಭ್ರಷ್ಟಚಾರದ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದ್ದರು. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಅದ್ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ಈಗ ಅದನ್ನೆಲ್ಲಾ ಮರೆತು ಚುನಾವಣೆ ಕಾಲದಲ್ಲಿ ಬಂದು ಅದು ಇದು ಎಂದು ಮಾತನಾಡುತ್ತಿದ್ದಾರೆ. ಭಾವನಾತ್ಮಕ ವಿಷಯಗಳನ್ನು ಬಿಟ್ಟು ನೇರವಾಗಿ ಅಭಿವೃದ್ಧಿಯ ವಿಚಾರದ ಮೇಲೆ ಚುನಾವಣೆಗೆ ಬನ್ನಿ ಎಂದು ಪ್ರಿಯಾಂಕ ಸವಾಲು ಹಾಕಿದರು.

ಆಸ್ಪತ್ರೆಗಳ ಅಭಿವೃದ್ಧಿ, ಕೃಷಿಕರ ಜೀವನ ಸುಧಾರಣೆ ಬಗ್ಗೆ ಚರ್ಚೆ ಮಾಡಿ. ಒಂಬತ್ತು ವರ್ಷದಲ್ಲಿ ರಾಜ್ಯಕ್ಕೆ ಏನೇನು ಕೊಡುಗೆ ನೀಡಿದ್ದೀರಾ ಹೇಳಿ. ಮೂರು ವರ್ಷದಲ್ಲಿ ರಾಜ್ಯದಲ್ಲಿ ಜನ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವುದಕ್ಕೆ ಯಾವ ನೆರವು ನೀಡಿದ್ದೀರಾ ತಿಳಿಸಿ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಜಿಎಸ್‍ಟಿ ಪದ್ಧತಿಯಿಂದ ಸಣ್ಣ ವ್ಯಾಪಾರಿಗಳ ಬೆನ್ನು ಮೂಳೆ ಮುರಿದಿದೆ. ಜನ ಸಾಮಾನ್ಯರು ತೆರಿಗೆ ಪಾವತಿಸಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಬಗ್ಗೆ ಪ್ರಧಾನಿ ಬಾಯಿ ಬಿಡುವುದಿಲ್ಲ. ಜಾತಿ, ಧರ್ಮಗಳ ವಿಷಯಕ್ಕೆ ಮಾತ್ರ ಮಾತನಾಡುತ್ತಾರೆ. ಜನ ಸಾಮಾನ್ಯರ ಸಂಕಷ್ಟಗಳು, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದರು.

ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್‍ನಿಂದಾಗಿ 1.20 ಲಕ್ಷ ಕೋಟಿ ರೂ. ಲೂಟಿ ಮಾಡಲಾಗಿದೆ. ಅದನ್ನು ಊಹಿಸಲು ಸಾಧ್ಯವಿಲ್ಲ. ಅದರಲ್ಲಿ ಹತ್ತಾರು ಏಮ್ಸ್ ಆಸ್ಪತ್ರೆಗಳು, ಸಾವಿರಾರು ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ, ಎರಡು ಸಾವಿರ ಸ್ಮಾರ್ಟ್ ಕ್ಲಾಸ್ ರೂಂಗಳು, ಮೂರ ಲಕ್ಷ ಮನೆಗಳನ್ನು ನಿರ್ಮಿಸಬಹುದಿತ್ತು. ಭ್ರಷ್ಟಚಾರ ಎಲ್ಲವನ್ನೂ ಮುಳುಗಿಸಿದೆ ಎಂದು ಟೀಕಿಸಿದರು.

ಭ್ರಷ್ಟಚಾರ ತಡೆಯದವರು ಜನರಿಗೆ ಮುಖ ತೋರಿಸುವುದಾದರೂ ಹೇಗೆ? ಭ್ರಷ್ಟಚಾರದಿಂದ ಬೆಂಗಳೂರಿನಂತಹ ಪ್ರತಿಷ್ಠಿತ ನಗರದಲ್ಲಿ ಹತ್ತಾರು ಖ್ಯಾತ ಕಂಪೆನಿಗಳು ಹೊರ ನಡೆದಿವೆ. ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಕ್ಷೀರ ಭಾಗ್ಯ ಯೋಜನೆ ತಂದು ಕೆಎಂಎಫ್ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲು ಯತ್ನಿಸಿತ್ತು. ಬಿಜೆಪಿ ಗುಜರಾತ್‍ನ ಅಮೂಲ್ ಉತ್ಪನ್ನಗಳನ್ನು ರಾಜ್ಯಕ್ಕೆ ತಂದು ನಂದಿನಿ ಬ್ರಾಂಡ್ ಅನ್ನು ಮುಳುಗಿಲು ಯತ್ನಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಜನ ಅವರಿಗೆ ಉತ್ತರ ನೀಡದಿದ್ದರೆ ಅವರು ಅನ್ಯಾಯ ಮಾಡುವುದನ್ನು ಮುಂದುವರೆಸುತ್ತಾರೆ.

ಚುನಾವಣೆ ವಿಷಯದಲ್ಲಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಪಡೆಯುತ್ತಾರೆ. ಅಭಿವೃದ್ಧಿ ವಿಷಯವನ್ನು ಮರೆತು ಬಿಡುತ್ತಾರೆ. ಜನ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಜನ ನಿಮ್ಮ ಭವಿಷ್ಯಕ್ಕಾಗಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಹಾಕಬೇಕು ಎಂದು ಕರೆ ನೀಡಿದರು.

ಒಂಬತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಜನರ ಮುಂದೆ ಹೇಳಬೇಕು. ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿ ಅನೇಕ ಕಾರ್ಯಕ್ರಮ ಜಾರಿಗೊಳಿಸಿತ್ತು. ಬಿಜೆಪಿ ಏನು ಮಾಡಿದೆ ಹೇಳಲಿ, ಮುಂದೆ ನಮ್ಮ ಸರ್ಕಾರ ಅಕಾರಕ್ಕೆ ಬಂದರೆ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಗಮ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!