ಇಸ್ಲಾಮಾಬಾದ್ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ತಿಂಗಳು ಜಿ–20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆ ನಡೆಸಲು ಭಾರತ ತೀರ್ಮಾನಿಸಿರುವುದನ್ನು ಪಾಕಿಸ್ತಾನ ಮಂಗಳವಾರ ಬಲವಾಗಿ ವಿರೋಧಿಸಿದೆ. ಅಲ್ಲದೆ ಇದನ್ನು ‘ಸ್ವ ಹಿತಾಸಕ್ತಿಯ ನಡೆ’ ಎಂದು ಕರೆದಿದೆ.
‘ಭಾರತ ಜಿ 20 ಕಾರ್ಯಕಾರಿ ಗುಂಪಿನ ಸಭೆಯನ್ನು ಶ್ರೀನಗರದಲ್ಲಿ ಮತ್ತು ಸಮಾವೇಶದ ಇತರ ಎರಡು ಸಭೆಗಳನ್ನು ಲೇಹ್ ಮತ್ತು ಶ್ರೀನಗರದಲ್ಲಿ ನಡೆಸಲು ತೀರ್ಮಾನಿಸಿರುವುದು ನೆಮ್ಮದಿಗೆಡಿಸಿದೆ’ ಎಂದು ಪಾಕ್ ವಿದೇಶಾಂಗ ಕಾರ್ಯಾಲಯ ತಿಳಿಸಿದೆ.
‘ಭಾರತದ ಸ್ವಹಿತಾಸಕ್ತಿ ಕೇಂದ್ರೀಕೃತ ಮತ್ತು ಬೇಜವಾಬ್ದಾರಿಯುತ ನಡೆಗೆ ಇದು ತಾಜಾ ಉದಾಹರಣೆ. ಪಾಕಿಸ್ತಾನ ಇದನ್ನು ಖಂಡಿಸುತ್ತದೆ. ಇಂಥ ಕಾರ್ಯಕ್ರಮಗಳ ಆಯೋಜನೆಯಿಂದ ಅಂತರರಾಷ್ಟ್ರೀಯ ಸಮುದಾಯಗಳ ಗಮನವನ್ನು ಬೇರೆಡೆ ಸೆಳೆಯಲು ಸಾಧ್ಯವಿಲ್ಲ ’ ಎಂದು ಹೇಳಿದೆ.





