Mysore
22
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ರಾಜಸ್ಥಾನದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ, ಹತ್ಯೆ: ವ್ಯಕ್ತಿ ಬಂಧನ

ಜೈಪುರ: ಮನೆಯಲ್ಲಿ ಒಂಟಿಯಾಗಿದ್ದ ವೇಳೆ ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಆಕೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಗುರುವಾರ (ಏ.6) ಘಟನೆ ನಡೆದಿದ್ದು, ಪರಿಹಾರದ ಭರವಸೆ ಸಿಕ್ಕ ಬಳಿಕವಷ್ಟೇ ಭಾನುವಾರ ಮಹಿಳೆಯ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದರು.

ಮಹಿಳೆಯು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಶಕೂರ್‌ ಖಾನ್‌ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಡ್ಮೇರ್‌ ಗ್ರಾಮದಲ್ಲಿ ಘಟನೆ ನಡೆಸಿದ್ದು, ಶಕೂರ್‌ ಕೂಡ ಇದೇ ಗ್ರಾಮದವರಾಗಿದ್ದಾರೆ. ಅತ್ಯಾಚಾರ ಎಸಗಿದ ಮೇಲೆ ಆ್ಯಸಿಡ್‌ ಅನ್ನು ಹೋಲುವ ವಸ್ತುವೊಂದನ್ನು ಆಕೆಯ ಮೈ ಮೇಲೆ ಎರಚಿ, ನಂತರ ಬೆಂಕಿ ಹಚ್ಚಲಾಗಿದೆ.

ಎರಡು ಮಕ್ಕಳ ತಾಯಿಯಾದ 30 ವರ್ಷದ ಮಹಿಳೆಗೆ ಶೇ 50ರಷ್ಟು ಸುಟ್ಟ ಗಾಯಗಳಾಗಿದ್ದವು. ಅವರನ್ನು ಜೋಧಪುರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ದಾಖಲು ಮಾಡಲಾಗಿತ್ತು. ಶನಿವಾರ ಮಹಿಳೆ ಮೃತಪಟ್ಟಿದ್ದಾರೆ.

‘ಇಬ್ಬರು ಪೊಲೀಸ್‌ ಅಧಿಕಾರಿಗಳು ನಮ್ಮಗಳ ಜೊತೆ ತಪ್ಪಾಗಿ ನಡೆದುಕೊಂಡಿದ್ದಾರೆ’ ಎಂದು ದೂರಿದ ಮಹಿಳೆಯ ಕುಟುಂಬಸ್ಥರು ಮೃತದೇಹವನ್ನು ಪಡೆಯಲು ನಿರಾಕರಿಸಿದರು. ‘ಉಪ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ವಜಾ ಮಾಡಬೇಕು. ₹1 ಕೋಟಿ ಪರಿಹಾರದ ಜೊತೆಗೆ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರಿ ಯೋಜನೆಗಳ ಅನ್ವಯ ಗರಿಷ್ಠ ಮಟ್ಟದ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ ಬಳಿಕ ಕುಟುಂಬದವರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಿದರು. ಶನಿವಾರ ರಾತ್ರಿ ವೇಳೆಗೆ ಮರಣೋತ್ತರ ಪರೀಕ್ಷೆ ನಡೆದಿದ್ದು, ಭಾನುವಾರ ಮಹಿಳೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು’ ಎಂದು ಬಾಡ್ಮೇರ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್‌ ಅವನೀಶ್‌ ಪನ್ವಾರ್‌ ತಿಳಿಸಿದರು.

ನಿಯೋಗ ಭೇಟಿ: ಪಾಲಿ ಕ್ಷೇತ್ರದ ಸಂಸದ ಪಿ.ಪಿ. ಚೌಧರಿ, ವಿರೋಧ ಪಕ್ಷದ ಉಪ ನಾಯಕ ಸತೀಶ್‌ ಪೋನಿಯಾ ಹಾಗೂ ಜಾಲೋರ್‌ ಕ್ಷೇತ್ರದ ಶಾಸಕ ಜೋಗೇಶ್ವರ್‌ ಗಾರ್ಗ್‌ ಅವರ ನಿಯೋಗವು ಮಹಿಳೆಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿತು.

‘ಒಬ್ಬ ಮಹಿಳೆಯಾಗಿ, ನೀವು ಮನೆಯಲ್ಲಿ ಒಂಟಿಯಾಗಿದ್ದೀರ ಎಂದಾದರೆ, ನೀವು ಸುರಕ್ಷಿತವಾಗಿಲ್ಲ. ರಾಜ್ಯ ಸರ್ಕಾರದಿಂದ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಸರ್ಕಾರವು ತನ್ನ ಮಾಲೀಕರನ್ನು ಓಲೈಸುವುದರಲ್ಲಿ ನಿರತವಾಗಿದೆ. ಜನರಿಗಾಗಿ ಈ ಸರ್ಕಾರ ಕೆಲಸ ಮಾಡುತ್ತಿಲ್ಲ’ ಎಂದು ಬಿಜೆಪಿ ಆರೋಪಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!