ಮಡಿಕೇರಿ: ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಬುಡಕಟ್ಟು ಸಚಿವಾಲಯವು 2017ರಲ್ಲಿ ಮರು ವ್ಯಾಖ್ಯಾನಿಸಿದ ಮಾನದಂಡದಡಿ ಕೊಡವ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಭದ್ರತೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಮೂಲ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದು ತ್ವರಿತವಾಗಿ ಆಗದಿದ್ದರೆ ಕೊಡವ ಬುಡಕಟ್ಟು ಜನಾಂಗದ ಭವಿಷ್ಯವು ಕತ್ತಲೆಯಲ್ಲಿ ಮುಳುಗುತ್ತದೆ. ಕೊಡವರ ಜಾನಪದ ಗುರುತು ಮತ್ತು ಭೌಗೋಳಿಕ-ರಾಜಕೀಯ ಅಸ್ತಿತ್ವಕ್ಕೆ ಹಾನಿಯಾಗಲಿದೆ. ಇತರ ಜನಾಂಗೀಯ ಗುಂಪುಗಳಿಗೆ ನೀಡಲಾಗುವ ಅದೇ ಸಾಂವಿಧಾನಿಕ ಪೋಷಣೆಯನ್ನು ಕೊಡವ ಬುಡಕಟ್ಟು ಜನಾಂಗಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
17 ಆಗಸ್ಟ್ , 2022ರಂದು ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡಿ, ಕಡತವನ್ನು ಕರ್ನಾಟಕದ ಸಿಎಂಗೆ ರವಾನಿಸಿದರು. ಆದರೆ ನಂತರದ ದಿನಗಳಲ್ಲಿ ಕಡತವನ್ನು ನಿರ್ಲಕ್ಷಿಸಲಾಗಿದೆ. ಇದು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ನಾಚಪ್ಪ ಟೀಕಿಸಿದ್ದಾರೆ.