Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ನಾಳೆ ಸೆಸ್ಕ್ ಉಪ ವಿಭಾಗ ಕಚೇರಿಗಳ ಶಂಕು ಸ್ಥಾಪನೆ

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾರಂಭ

ಮೈಸೂರು: ಸೆಸ್ಕ್‌ನಿಂದ 2.91 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಕೆ.ಆರ್.ಪೇಟೆ ಉಪ ವಿಭಾಗ ಕಚೇರಿ, 1.96 ಕೋಟಿ ರೂ. ವೆಚ್ಚದ ಎಚ್.ಡಿ.ಕೋಟೆ ಉಪ ವಿಭಾಗ ಕಚೇರಿ, 1.99 ಕೋಟಿ ರೂ. ವೆಚ್ಚದ ಪಿರಿಯಾಪಟ್ಟಣ ಉಪ ವಿಭಾಗ ಕಚೇರಿ, 1.98 ಕೋಟಿ ರೂ. ವೆಚ್ಚದ ಗುಂಡ್ಲುಪೇಟೆ ಉಪ ವಿಭಾಗ ಕಚೇರಿ, 71 ಲಕ್ಷ ರೂ. ವೆಚ್ಚದ ಎಚ್.ಡಿ.ಕೋಟೆ ಹಾಗೂ 92 ಲಕ್ಷ ವೆಚ್ಚದ ಕಣಕಟ್ಟೆ ಶಾಖಾ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಜ.20ರಂದು ನೆರವೇರಲಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಟಿಸಿಎಲ್ ವತಿಯಿಂದ ವರಕೋಡು(ವರುಣ)ವಿನಲ್ಲಿ 10.02 ಕೋಟಿ ರೂ. ವೆಚ್ಚದಲ್ಲಿ 6611 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಶಂಕುಸ್ಥಾಪನೆ, 13.12 ಕೋಟಿ ರೂ. ವೆಚ್ಚದಲ್ಲಿ ಉದ್ಭೂರು (ಡಿ.ಸಾಲುಂಡಿ) ಉಪ ಕೇಂದ್ರ, 11.54 ಕೋಟಿ ರೂ. ವೆಚ್ಚದಲ್ಲಿ ರತ್ನಪುರಿ ಉಪ ಕೇಂದ್ರ, 10.45 ಕೋಟಿ ವೆಚ್ಚದಲ್ಲಿ ಮಾರಗೌಡನಹಳ್ಳಿ (ಮಾವತ್ತೂರು) ಉಪಕೇಂದ್ರ, 13.29 ಕೋಟಿ ರೂ. ವೆಚ್ಚದಲ್ಲಿ ಸುಂಕಾತೊಣ್ಣೂರು (ಹಳೇಬೀಡು) ಉಪಕೇಂದ್ರ, 8.16 ಕೋಟಿ ರೂ. ವೆಚ್ಚದ ಈಚಲುಗುಡ್ಡ ಕಾವಲ್ ಉಪಕೇಂದ್ರ, 12.59 ಕೋಟಿ ರೂ. ವೆಚ್ಚದ ಬೀರುವಳ್ಳಿ ಉಪಕೇಂದ್ರ, 6.59 ಕೊಟಿ ರೂ. ವೆಚ್ಚದಲ್ಲಿ ಧನಗೂರು ಉಪ ಕೇಂದ್ರಗಳಿಗೆ ಶಂಕುಸ್ಥಾಪನೆ ಸೇರಿದಂತೆ ಒಟ್ಟಾರೆ 116.77 ಕೋಟಿ ರೂ. ವೆಚ್ಚದ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಲಿದೆ ಎಂದರು.

ಶುಕ್ರವಾರ ಬೆಳಿಗ್ಗೆ 11.30ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉಪಸ್ಥಿತಿಯಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಇಂಧನ ಸಚಿವ ವಿ.ಸುನಿಲ್‌ಕುಮಾರ್ ಅವರು ಕಾಮಗಾರಿಗಳನ್ನು ಉದ್ಘಾಟಿಸಿದರೆ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಚಿವರುಗಳಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಬಿ.ಸಿ.ನಾಗೇಶ್, ಕೆ.ಸಿ.ನಾರಾಯಣ ಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಶಾಸಕ ಸಿ.ಎಸ್.ನಿರಂಜನ ಕುಮಾರ್, ಮಹಾಪೌರ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳ ಚುನಾಯಿತ ಜನ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ವಿದ್ಯುತ್ ಬಿಲ್ ಪಾವತಿಗಾಗಿ ಸೆಸ್ಕ್‌ನಿಂದ ಆನ್‌ಲೈನ್, ಬಾರ್‌ಕೋಡ್ ಪಾವತಿ ವ್ಯವಸ್ಥೆ ಜತೆಗೆ ಜನವರಿ 1ರಿಂದ ಕ್ಯೂ ಆರ್ ಕೋಡ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಕಳೆದ 15 ದಿನಗಳಲ್ಲಿ ಶೇ.5ರಿಂದ 10ರಷ್ಟು ಗ್ರಾಹಕರು ಮಾತ್ರ ಈ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದು, ಮೂರ್ನಾಲ್ಕು ತಿಂಗಳಲ್ಲಿ ಈ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

-ಜಯವಿಭವ ಸ್ವಾಮಿ, ಎಂಡಿ, ಸೆಸ್ಕ್

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!