Mysore
24
broken clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಸಿಎಫ್‌ಟಿಆರ್‌ಐ ಕ್ಯಾಂಪಸ್ಸಿನಲ್ಲಿ ಚಿರತೆ ಪ್ರತ್ಯಕ್ಷ

ಮೈಸೂರು ನಗರದ ಹೊರವಲಯದಲ್ಲಿದ್ದ ಚಿರತೆ ಈಗ ನಗರದೊಳಗೇ ಕಾಣಿಸಿಕೊಂಡು ಆತಂಕ

ಮೈಸೂರು: ನಗರದ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ನಗರದೊಳಗೆ ಬಂದಿದೆ. ನಗರದ ಸಿಎಫ್ ಟಿಆರ್ ಐ ಕ್ಯಾಂಪಸ್‌ ನಲ್ಲಿ ಮಂಗಳವಾರ ರಾತ್ರಿ 1 ಗಂಟೆ ಸಮಯದಲ್ಲಿ ಎರಡು ಚಿರತೆ ಕಾಣಿಸಿಕೊಂಡಿವೆ.

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ರಾತ್ರಿ ಚಿರತೆ ಓಡಾಡಿರುವುದನ್ನು ಸಂಸ್ಥೆಯ ಕಾವಲು ಸಿಬ್ಬಂದಿ ಗಮನಿಸಿದ್ದು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಕಾರ್ಯ ಪ್ರವೃತ್ತವಾಗಿದ್ದು 10 ಮಂದಿ ಸಿಬ್ಬಂದಿಗಳನ್ನು ಚಿರತೆ ಜಾಡು ಪತ್ತೆಗೆ ನೇಮಿಸಲಾಗಿದೆ. ಸದ್ಯ ಕ್ಯಾಂಪಸ್ಸಿನಲ್ಲಿ ಒಂದು ಬೋನು ಇಡಲಾಗಿದೆ. ಅಗತ್ಯ ಬಿದ್ದರೆ ಮತ್ತೊಂದು ಬೋನು ಇಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಂಪಸ್‌ ನಲ್ಲಿ ಸದ್ಯ ರಾತ್ರಿ ದೃಶ್ಯಗಳನ್ನು ಸೆರೆ ಹಿಡಿಯುವ ಸಿಸಿ ಕೆಮೆರಾ ಗಳಿಲ್ಲ. ಇದಕ್ಕಾಗಿ ತಕ್ಷಣವೇ ನಾಲ್ಕು ನೈಟ್ ಕ್ಯಾಪ್ಚರಿಂಗ್‌ ಸಿಸಿ ಕೆಮೆರಾ ಅಳವಡಿಸಲಾಗುತ್ತಿದೆ. ಸಿಎಫ್‌ ಟಿಆರ್ ಐ ಕ್ಯಾಂಪಸ್ ನಲ್ಲಿ ಇರುವ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ಆಂದೋಲನಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಮೇಟಗಳ್ಳಿಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ (ಆರ್‌ಬಿಐ) ಆವರಣದಲ್ಲಿ ಚಿರತೆಯ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಚಿರತೆಯ ಕಾರಣಕ್ಕೆ ಆರ್ ಬಿ ಐ ಸನಿಹದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಸೆಪ್ಟೆಂಬರ್ 1 ರಿಂದ ಸುಮಾರು ಎರಡು ವಾರ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಮರಿಗಳೊಂದಿಗೆ ಕಾಣಿಸಿಕೊಂಡಿದ್ದ ಚಿರತೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಆರ್‌ ಬಿ ಐ ಕ್ಯಾಂಪಸ್‌ ನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಚಿರತೆ ಪತ್ತೆಯಾಗಿರಲಿಲ್ಲ. ಈ ಹಿಂದೆ ಬೆಮೆಲ್‌ ಕ್ಯಾಂಪಸ್‌, ಗೋಕುಲಂ, ಹೆಬ್ಬಾಳ, ಚಾಮುಂಡಿ ಬೆಟ್ಟ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಚಿರತೆ ಕಾಣಿಸಿಕೊಂಡಿತ್ತು.

ನಾಗರ ಹೊಳೆ, ಬಂಡೀಪುರ ಅಭಯಾರಣ್ಯಗಳು ಮೈಸೂರಿಗೆ ಸನಿಹದಲ್ಲಿವೆ. ಚಾಮುಂಡಿ ಬೆಟ್ಟವೂ ಸನಿಹದಲ್ಲೇ ಇರುವುದರಿಂದ ಆಗಾಗ್ಗೆ ಮೈಸೂರಿನ ಜನ ವಸತಿ ಪ್ರದೇಶಗಳತ್ತ ಚಿರತೆಗಳು ಬರುವುದು ಸಾಮಾನ್ಯ. ಚಿರತೆಗಳು ಒಂದೇ ಕಡೆ ನೆಲೆ ನಿಲ್ಲುವುದಿಲ್ಲ. ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುತ್ತವೆ. ಹಗಲು ಹೊತ್ತಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಹಾಗಾಗಿ ಜನರು ಭಯ ಪಡುವ ಅಗತ್ಯವಿಲ್ಲ. ರಾತ್ರಿ ವೇಳೆ ಓಡಾಡುವಾಗ ಎಚ್ಚರಿಕೆಯಿಂದ ಇದ್ದರೆ ಸಾಕು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!