ಮೈಸೂರು: ಕಾರು ಅಪಘಾತಕ್ಕೊಳಗಾಗಿದ್ದ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ಹರಿಯಾಣ ರೋಡ್ ವೇಸ್ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಮತ್ತು ಕೆಲವು ಸ್ಥಳೀಯರನ್ನು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಗೌರವಿಸಿ ಸನ್ಮಾನಿಸಿದ್ದಾರೆ.
ಕ್ರಿಕೆಟಿಗ ರಿಷಭ್ ಪಂತ್ ಡಿಸೆಂಬರ್ 30 ರಂದು ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಭೀಕರ ಅಪಘಾತಕ್ಕೊಳಗಾದರು. ಹಮ್ಮದ್ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಪಂತ್ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಬೆಂಕಿ ಹೊತ್ತಿಕೊಂಡಿದ್ದ ಕಾರಿನಿಂದ ಮುಂಭಾಗದ ಗಾಜು ಒಡೆದು ಪಂತ್ ಹೊರಗೆ ಬಂದಿದ್ದಾರೆ. ನಂತರ ರಸ್ತೆ ಪಕ್ಕದಲ್ಲಿ ಬಿದ್ದು ನೋವಿನಿಂದ ನರಳುತ್ತಿದ್ದ ಪಂತ್ ಅವರನ್ನು ಹರಿಯಾಣ ರೋಡ್ ವೇಸ್ ನ ಚಾಲಕ ಸುಶೀಲ್ ಕುಮಾರ್ ಮತ್ತು ನಿರ್ವಾಹಕ ಪರಮ್ಜಿತ್ ಸಿಂಗ್ ರಕ್ಷಿಸಿ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದರು. ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಈ ಇಬ್ಬರನ್ನು ಕರೆದು ನಗದು ಪುರಸ್ಕಾರವಿತ್ತು ಗೌರವಿಸಿದ್ದಾರೆ.





