ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಗ್ರಾಮದ ಸಮೀಪವಿರುವ ಹುಲಗನಮುರಡಿ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಬೆಟ್ಟಕ್ಕೆ ಹೋಗುವ ಭಕ್ತಾದಿಗಳು ಹಾಗೂ ದನಗಾಹಿಗಳು ಭಯಭೀತರಾಗಿದ್ದಾರೆ.
ಬೆಟ್ಟದ ಸುತ್ತಮುತ್ತ ಚಿರತೆ ಓಡಾಡುತ್ತಿದ್ದು, ಶುಕ್ರವಾರ ಸಂಜೆ ಬೆಟ್ಟಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದಿದ್ದು, ಮೊಬೈಲ್ ನಲ್ಲಿ ಪೊಟೋ ತೆಗೆದಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬೆಟ್ಟದ ತಪ್ಪಲಿನ ಕಿಲಗೆರೆ ಗ್ರಾಮದ ಹುಲಗಾದ್ರಿನಾಯ್ಕ ಎಂಬುವರಿಗೆ ಸೇರಿದ ಕುರಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ದನಗಾಹಿಗಳು ಬೆಟ್ಟದ ತಪ್ಪಲಿಗೆ ತಮ್ಮ ಜಾನುವಾರು ಮೇಯಿಸಿಕೊಂಡು ಬರಲು ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಭಕ್ತಾದಿಗಳು ಬೆಟ್ಟದಲ್ಲಿ ಪೂಜೆ ಸಲ್ಲಿಸಲು ಮುಂಜಾನೆ, ರಾತ್ರಿ ವೇಳೆ ದ್ವಿ ಚಕ್ರ ವಾಹನಗಳಲ್ಲಿ ತೆರಳುತ್ತಿದ್ದು, ಈಗ ಅವರೆಲ್ಲ ಭಯಗೊಂಡಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಟ್ಟದ ತಪ್ಪಲಿನಲ್ಲಿ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯುಂತೆ ಒತ್ತಾಯಿಸಿದ್ದಾರೆ.





