Mysore
28
moderate rain

Social Media

ಶನಿವಾರ, 13 ಜೂನ್ 2026
Light
Dark

ತಂಬಾಕು ಹುಡಿಗೂ ಹೆಚ್ಚಿದ ಬೇಡಿಕೆ; ರೈತರಲ್ಲಿ ಸಂತಸ

ತಂಬಾಕು ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ರೈತರಿಗೆ ಅಧಿಕಾರಿಗಳ ಸಲಹೆ

ಎಂ.ಯೋಗಾನಂದ
ಹುಣಸೂರು: ಈ ವರ್ಷ ತಂಬಾಕು ಬೆಳೆದ ರೈತನಿಗೆ ಸಮಾಧಾನ ತಂದಿದ್ದು, ಬೆಳೆದ ತಂಬಾಕಿಗೆ ಹಾಗೂ ತಂಬಾಕು ಹದಗೊಳಿಸುವಾಗ ಉದುರುವ ಹುಡಿಗೂ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದ್ದು, ತಂಬಾಕು ಇರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಈಚಿನ ವರ್ಷಗಳಲ್ಲಿ ತಂಬಾಕಿಗೆ ಉತ್ತಮ ಬೆಲೆ ದೊರೆಯದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ವರ್ಷ ನಿರೀಕ್ಷೆಗಿಂತ ಹೆಚ್ಚಾಗಿ ಮಾರಾಟವಾಗುತ್ತಿರುವ ತಂಬಾಕಿನ ಬೆಲೆ ಒಂದೆಡೆಯಾದರೆ ತಂಬಾಕು ಹುಡಿಗೂ ಬೇಡಿಕೆ ಹೆಚ್ಚಾಗಿದೆ.
ಕೆಲವು ವರ್ಷಗಳಿಂದ ಹುಡಿಗೆ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡದೆ ರೈತರು ಮನೆಯ ಹತ್ತಿರ ಸಣ್ಣ ವ್ಯಾಪಾರಿಗಳಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಹುಡಿಯನ್ನು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲು ಅವಕಾಶ ಕೊಡಿ ಎಂಬ ರೈತರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

ಈಗ ಉತ್ತಮ ದರ್ಜೆಯ ತಂಬಾಕಿಗೆ ಸರಾಸರಿ ೨೫೦ ರೂ.ತನಕವೂ ದೊರೆಯುತ್ತಿದೆ. ರೈತರು ನೀರು ಹಾಕದೆ ಹಾಗೂ ಅನ್ಯ ಪದಾರ್ಥಗಳನ್ನು ಸೇರಿಸದೆ ಚೆನ್ನಾಗಿ ಬೇಲ್ ಮಾಡಿಕೊಂಡು ಬಂದರೆ ಇದೇ ಬೆಲೆ ಕೊಡಿಸಲು ಸಹಕಾರಿಯಾಗುತ್ತದೆ ಎಂದು ತಂಬಾಕು ಮಂಡಳಿಯ  ಪ್ಲಾಟ್ ಫಾರಂ ನಂ. ೨ರ ಹರಾಜು ಅಧೀಕ್ಷಕ ಧನ್‌ರಾಜ್ ತಿಳಿಸಿದರು.

ತಂಬಾಕು ಹುಡಿಗೆ ಉತ್ತಮ ಬೇಡಿಕೆ ಇರುವುದರಿಂದ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ರೈತರು ಮುಂದಿನ ದಿನಗಳಲ್ಲಿ ಅನ್ಯ ಪದಾರ್ಥಗಳನ್ನು ಸೇರಿಸದೆ ಚೆನ್ನಾಗಿ ಬೇಲ್ ಮಾಡಿಕೊಂಡು ಬರಬೇಕು. ರೈತರು ಹೊರಗಡೆ ಹುಡಿಯನ್ನು ಮಾರಾಟ ಮಾಡಬಾರದು ಎಂದು ಆದಿನಾರಾಯಣ ಎಂಟರ್‌ಪ್ರೈಸಸ್ ಕಂಪೆನಿ ಅಧಿಕಾರಿ ಕೂಸಪ್ಪ ಸಲಹೆ ನೀಡಿದರು.

ಹಿಂದೆ ಹುಡಿಯನ್ನು ಕೆ.ಜಿ.ಗೆ ೧೫-೨೦ ರೂ. ಗಳಿಗೆ ಮನೆಯ ಹತ್ತಿರ ಮಾರಾಟ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ವರ್ಷ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಉತ್ತಮ ಬೆಲೆ ಸಿಕ್ಕಿದೆ. ೧೩೦-೧೪೦ ರೂ.ತನಕ ದೊರೆಯುತ್ತಿದೆ. ಇದರಿಂದ ಖುಷಿಯಾಗುತ್ತಿದೆ. ಇದೇ ಬೆಲೆಯನ್ನು ಮುಂದೆುಯೂ ಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ.

-ತಾಜು, ತಂಬಾಕು ಬೆಳೆಗಾರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!