Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ತಾಯಿ ಬದಲು ಮರಿ ಚಿರತೆ ಬೋನಿಗೆ ಬಿತ್ತು..

ಅಂತರಸಂತೆ: ಕರುವೊಂದನ್ನು ಚಿರತೆ ಬಲಿಪಡೆದಿದ್ದ ಕಾರಣಕ್ಕಾಗಿ ಇರಿಸಿದ್ದ ಬೋನಿಗೆ ಚಿರತೆಯ ಮರಿಯೊಂದು ಸೆರೆಯಾಗಿದ್ದು, ತಾಯಿ ಮತ್ತು ಮತ್ತೊಂದು ಮರಿ ಇರುವುದಾಗಿ ಅದಕ್ಕಾಗಿ ಮತ್ತೇ ಹೆಚ್ಚುವರಿ ಬೋನು ಇರಿಸುವಂತೆ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸಮೀಪದ ಬದನೆಕುಪ್ಪೆ ಗ್ರಾಮದ ಜವರೇಗೌಡ ಎಂಬುವವರ ಕರುವೊಂದನ್ನು ಚಿರತೆಯು ಭಾನುವಾರ ತಡರಾತ್ರಿ ಬಲಿಪಡೆದಿತ್ತು. ಕೂಡಲೇ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜೂರು ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಅಲ್ಲದೆ ಚಿರತೆಯ ಉಪಟಳ ಹೆಚ್ಚಿರುವುದರಿಂದ ಗ್ರಾಮಸ್ಥರ ಬೇಡಿಕೆಯ ಮೇರೆಗೆ ಕಬಿನಿ ಹಿನ್ನೀರಿನ ಸಮೀಪದ ಜಮೀನುವೊಂದರಲ್ಲಿ ಬೋನು ಸಹ ಇರಿಸಲಾಗಿತ್ತು. ಆದರೆ ಮಂಗಳವಾರ ಮುಂಜಾನೆ ಆ ಬೋನಿಗೆ ಸುಮಾರು ೧೦-೧೨ ತಿಂಗಳ ಚಿರತೆ ಮರಿಯೊಂದು ಸೆರೆಯಾಗಿದ್ದು, ಅದರ ತಾಯಿ ಹಾಗೂ ಮತ್ತೊಂದು ಮರಿ ಅಲ್ಲಿಯೇ ಓಡಾಡುತ್ತಿವೆ ಅವುಗಳನ್ನು ಸಹ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಅಧಿಕಾರಿಗಳು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ: ಇದೇ ವೇಳೆ ಇಲಾಖೆಯ ವತಿಯಿಂದ ಬರುವ ಪರಿಹಾರ ಸಾಕಷ್ಟು ತಡವಾಗುತ್ತಿದೆ. ಪರಿಹಾರವನ್ನು ನೀಡಿ ಬಳಿಕ ಚಿರತೆಯನ್ನು ತೆಗೆದುಕೊಂಡು ಹೋಗಿ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಕೆಲ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಮುಂದಾದರು. ನಮ್ಮ ಭಾಗದಲ್ಲಿ ಈಗಾಗಲೇ ಸಾಕಷ್ಟು ಹಸು, ಕರುಗಳು, ಮೇಕೆಗಳು ಚಿರತೆಯ ದಾಳಿಗೆ ಬಲಿಯಾಗಿವೆ. ಆದರೆ ಇನ್ನೂ ಸರಿಯಾದ ಪರಿಹಾರ ಬಂದು ತಲುಪಿಲ್ಲ. ಅವು ಭೇಟೆಯಾಡಿ ಎಳೆದುಕೊಂಡು ಹೋದ ಕರುಗಳ ಮೃತ ದೇಹವು ಕೆಲಬಾರಿ ಸಿಗದೆ ಪರಿಹಾರಕ್ಕೆ ಅದು ದಾಖಲಾಗಿಲ್ಲ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿ ಇನ್ನು ಸಹ ಚಿರತೆಯ ಹಾವಳಿ ಹೆಚ್ಚಿದ್ದು, ಹೆಚ್ಚಿನ ಬೋನಿಗಳನ್ನು ಇರಿಸಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಬಳಿಕ ಪ್ರಾದೇಶಿಕ ವಲಯದ ಡಿಆರ್‌ಎಫ್‌ಒ ಪಿ.ಚಂದನ್ ಪರಿಸ್ಥಿತಿಯನ್ನು ನಿಭಾಯಿಸಿ ಗ್ರಾಮಸ್ಥರೊಂದಿಗೆ ಸಮಾಲೋಜನೆ ನಡೆಸಿ ಬೋನು ಇರಿಸುವ ಭರವಸೆ ನೀಡಿ ಚಿರತೆಯನ್ನು ಸ್ಥಳಾಂತರ ಗೊಳಿಸಿದರು.
ಸ್ಥಳದಲ್ಲಿ ಡಿಆರ್‌ಎಫ್‌ಒ ಪಿ.ಚಂದನ್, ಸಿಬ್ಬಂದಿಗಳಾದ ನಾರಾಯಣ್, ಮಹಮದ್, ಎನ್‌ಜಿಒ ಪ್ರತಿನಿಧಿ ಧನುಷ್, ಕಾಂಗ್ರೆಸ್ ಮುಖಂಡ ಮನು ಹೊಸಮಾಳ, ಗ್ರಾಮಸ್ಥರಾದ ಮಂಜು, ನಾಗೇಗೌಡ, ಉಮೇಶ್, ರಾಮಚಂದ್ರ, ಶಶಿ, ಎತ್ತೇಗೌಡ, ಚಿನ್ನಯ್ಯ, ಹನುಮಂತ, ಗಣೇಶ್ ಮುಂತಾದವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!