ಹನೂರು : ಪಟ್ಟಣಕ್ಕೆ ಡಿಸೆಂಬರ್ 12ರಂದು ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ ಕಾರ್ಯಕ್ರಮದ ಸ್ಥಳಕ್ಕೆ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್ ನರೇಂದ್ರ ಮಾತನಾಡಿ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಬರುತ್ತಿರುವುದರಿಂದ ಯಾವುದೇ ಗೊಂದಲ ಉಂಟಾಗಬಾರದು, ಗಣ್ಯರ ವಾಹನ,ದ್ವಿಚಕ್ರ ವಾಹನ, ಹಾಗೂ ಬಸ್ ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮದ ಸ್ಥಳದಿಂದ ಪಾರ್ಕಿಂಗ್ ಸ್ಥಳಕ್ಕೆ ಸುಮಾರು 500 ಮೀಟರ್ ಅಂತರದಲ್ಲಿರಬೇಕು ಒಂದೇ ಬಾರಿ ವಾಹನ ದಟ್ಟಣೆ ಹೆಚ್ಚಾದರೆ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್ ರವರಿಗೆ ಸೂಚನೆ ನೀಡಿದರು.
ಇನ್ನು ಗಣ್ಯರ ವೇದಿಕೆ ಹಾಗೂ ಸಾರ್ವಜನಿಕರಿಗೆ ಸಿದ್ಧಪಡಿಸಿರುವ ಶಾಮಿಯಾನದ ಬಗ್ಗೆ ಮಾಹಿತಿ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಆಗಮಿಸುವ ಹಿನ್ನೆಲೆ ನಾಲ್ಕು ಕಡೆ ದ್ವಾರಗಳನ್ನು ನಿರ್ಮಿಸಿ ಅನುವು ಮಾಡಿಕೊಡಬೇಕು ಎಂದು ತಿಳಿಸಿದ್ದಲ್ಲದೆ, ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟೆಗಳನ್ನು ತೆರವುಗೊಳಿಸಿ, ಸುತ್ತ ಬ್ಲೀಚಿಂಗ್ ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಮೂರ್ತಿ ರವರಿಗೆ ಸೂಚಿಸಿದರು.
ಹನೂರು ಪಟ್ಟಣದಿಂದ ಬಂಡಳ್ಳಿ ತೀವ್ರ ಹದಗೆಟ್ಟಿರುವ ರಸ್ತೆ ದುರಸ್ತಿ ಪಡಿಸುವಂತೆ ನಿಮಗೆ ಹಲವಾರು ಬಾರಿ ತಿಳಿಸಿದ್ದೇನೆ.ಆದರೂ ನೀವು ಕ್ರಮವಹಿಸಿಲ್ಲ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕೂಡಲೇ ಕ್ರಮ ವಹಿಸಿದಿದ್ದರೆ ಮುಂದಾಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ಎಂದು ಎ ಇಇ ರಾಜೇಶ್ ಮುನ್ಸಿರವರಿಗೆ ತಿಳಿಸಿದರು. ಈ ವೇಳೆ ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ಹರೀಶ್, ಸಂಪತ್, ಸೋಮಶೇಖರ್, ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್, ಮುಖ್ಯಾಧಿಕಾರಿ ಮೂರ್ತಿ, ಎಇಇ ಚಿನ್ನಣ್ಣ, ಆರೋಗ್ಯ ನಿರೀಕ್ಷಕ ಬಾಲಸುಬ್ರಹ್ಮಣ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.