ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿ
ಚಾಮರಾಜನಗರ: ಬಿಜೆಪಿ ಸಂಚಾರಿ ಸೇವಾ ಸಿಂಧು ವಾಹನದ ಮೂಲಕ ಉಚಿತ ಸೇವೆಗೆ ನಗರದ ಸೋಮವಾರಪೇಟೆ ಬಡಾವಣೆಯಲ್ಲಿ ಕೆಲವು ಮುಖಂಡರು ಅಡ್ಡಿಪಡಿಸಿ ಘಟನೆ ಸೋಮವಾರ ನಡೆದಿದೆ.
ಬಡಾವಣೆಯಲ್ಲಿ ಸಾರ್ವಜನಿಕರಿಗೆ ಉಚಿತ ಸೇವೆ ನೀಡಲು ಮುಂದಾದ ವಾಹನವನ್ನು ಬಡಾವಣೆಯ ನಗರಸಭೆ ಮಾಜಿ ಸದಸ್ಯ ಮಹದೇವಯ್ಯ ಮತ್ತು ಇತರರು ತಡೆದು ಚಾಲಕರು ಮತ್ತು ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆಯ ಪೊಲೀಸರು ಮುಖಂಡರನ್ನು ಸಮಾಧಾನ ಪಡಿಸಿದ್ದಾರೆ.
೨ ಸೇವಾ ಸಿಂಧು ವಾಹನಗಳಲ್ಲಿ ಬಡಾವಣೆಗೆ ತೆರಳಿದ್ದ ನಾಲ್ವರು ಸಿಬ್ಬಂದಿಯನ್ನು ಪ್ರಶ್ನಿಸಿದ ಮುಖಂಡರು, ಸಾರ್ವಜನಿಕ ಸೇವೆಯನ್ನು ನೀಡುವುದಕ್ಕೆ ನೀವು ಯಾರು. ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳಲಿದ್ದೇವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಚಿತ ಸೇವೆಯನ್ನು ನೀಡಲು ಅವರು ಯಾರು ಅಂತ ಕೇಳಿ ಎಂದು ನಮ್ಮ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ ಎಂದು ಮುಖಂಡರು ತಕರಾರು ತೆಗೆದಿದ್ದಾರೆ. ಮುಖಂಡರ ವರ್ತನೆಯನ್ನು ಸಿಬ್ಬಂದಿ ಖಂಡಿಸುತ್ತಿದ್ದAತೆ ಹಲ್ಲೆಗೆ ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪಟ್ಟಣ ಠಾಣೆಯ ಪೋಲಿಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ನಂತರ ಸ್ಥಳಕ್ಕೆ ನಗರ ಸಭೆಯ ಮತ್ತು ಕಂದಾಯ ಇಲಾಖೆಯ ಆಧಿಕಾರಿಗಳು ಭೇಟಿ ನೀಡಿ ವಾಹನ ಮತ್ತು ನಮ್ಮ ಉಚಿತ ಸೇವೆಯ ಮಾಹಿತಿಯನ್ನು ಪರಿಶೀಲಿಸಿದರು. ಈ ಘಟನೆ ಬಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ವಾಹನದ ಚಾಲಕ ಲಿಂಗರಾಜು ದೂರು ದಾಖಲಿಸಿದ್ದಾರೆ.
ಸಾರ್ವಜನಿಕರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಸಹಿಸದೆ ಕೆಲವರು ಸೇವಾ ಸಿಂಧು ವಾಹನ ಹಾಗೂ ಆಪರೇಟರ್ ಮೇಲೆ ಹಲ್ಲೆ ಮಾಡಲು ಯತ್ನಿಸಿರುವುದು ಸರಿಯಲ್ಲ ಎಂದು ಸೇವಾ ಸಿಂಧು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಕಾಡಾಧ್ಯಕ್ಷ ಜಿ.ನಿಜಗುಣರಾಜು ಖಂಡಿಸಿದ್ದಾರೆ.




