Mysore
23
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಕೊಲೆ ಬೆದರಿಕೆ ಆರೋಪ; ಅಡ್ಡಂಡ ಕಾರ್ಯಪ್ಪ ದೂರು

ಮೈಸೂರು: ‘ನನಗೆ ಕೊಲೆ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾನು ‘ಟಿಪ್ಪು ನಿಜಕನಸುಗಳು’ ಎಂಬ ನಾಟಕವನ್ನು ರಚಿಸಿ, ನಿರ್ದೇಶನ ಮಾಡಿದ್ದು, ಈ ನಾಟಕದ ಪ್ರದರ್ಶನ ಆರಂಭವಾದ ದಿನದಿಂದ ನನ್ನ ವಿರುದ್ಧ ಕೆಲವರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಮೈಸೂರಿನ ಮಹೇಶಚಂದ್ರ ಗುರು ಎಂಬವವರು ವೀಡಿಯೋದಲ್ಲಿ ನಿಂದಿಸಿದ್ದಾರೆ. ಇದರಿಂದ ಪ್ರಚೋದನೆಗೊಂಡು ಕೆಲವರು ನನ್ನನ್ನು ನಿಂದಿಸಲು ತೊಡಗಿದ್ದಾರೆ.

ನ.೨೮ರಂದು ಶಿವಮೊಗ್ಗದ ಬ್ರಾಹ್ಮಣ ಬೀದಿ, ಶ್ರೀರಾಂ ಕೋಟ ರಸ್ತೆ ಎಂಬ ವಿಳಾಸದಿಂದ ಪತ್ರವೊಂದು ಬಂದಿದ್ದು, ಈ ಪತ್ರದಲ್ಲಿ ‘ನೀವೀಗ ಸಾಯುವ, ಕೊಲೆ ಆಗುವ ಹಂತ ತಲುಪಿದ್ದೀರಾ. ನಿಮ್ಮನ್ನು ನೀವು ನಂಬಿರುವ ದೇವರು ಸಹ ಉಳಿಸುವುದಿಲ್ಲ’ ಎಂದು ಜೀವ ಬೆದರಿಕೆ ಒಡ್ಡಲಾಗಿದೆ. ಶಿವಮೊಗ್ಗದಿಂದ ಪೋಸ್ಟ್ ಕಾರ್ಡಿನಲ್ಲಿ ಇನ್ನೊಂದು ಪತ್ರವೂ ಬಂದಿದ್ದು ಅದರಲ್ಲೂ ಬೆದರಿಕೆ ಹಾಕಲಾಗಿದೆ.

ನಾನು ನನ್ನ ಕಚೇರಿಯ ಕೆಲಸಗಳು, ನಾಟಕದ ಸಂಘಟನಾತ್ಮಕ ಕೆಲಸಗಳಿಗಾಗಿ ಹೊರಗೆ ಹೋಗಬೇಕಾಗುತ್ತದೆ. ಈ ರೀತಿಯ ಬೆದರಿಕೆ ಕರೆ ಒಡ್ಡುವವರು ನನಗೆ ಜೀವಹಾನಿ ಮಾಡಬಹುದು ಎಂಬ ಅನುಮಾನ ಇದೆ. ಅಲ್ಲದೇ, ಮಹೇಶ್ ಚಂದ್ರಗುರು ಅಂಥವರು ಮತ್ತು ಇತರ ಸಹಚರರು ಇಂತಹವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದ್ದರಿಂದ, ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!