ಟಿ.ಜಿ.ಎಸ್.ಅವಿನಾಶ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕ ಬಿಡುಗಡೆ
ಸಾಮ್ರಾಜ್ಯಗಳನ್ನು ಕಟ್ಟಲು ತಳಹದಿ ಹಾಕಿಕೊಟ್ಟಿರುವುದು ಕೃಷಿ. ಅದನ್ನು ಲಾಭದಾಯಕ ಮಾಡಲು ನಿಸರ್ಗದೊಂದಿಗೆ ನಡೆಯಬೇಕು. ನಿಸರ್ಗದೊಂದಿಗೆ ಅನುಸಂಧಾನ ಮಾಡಬೇಕೇ ಹೊರತು ಅದರೊಂದಿಗೆ ಯುದ್ಧಕ್ಕೆ ಇಳಿಯಬಾರದು.
-ಡಾ.ಬಂಜಗೆರೆ ಜಯಪ್ರಕಾಶ್
ಮೈಸೂರು: ದೇಶದ ಶೇ.೬೦ರಷ್ಟು ಮಂದಿ ತೊಡಗಿರುವ ಕೃಷಿ ಕ್ಷೇತ್ರ ಅವನತಿಯ ಹಾದಿಯಲ್ಲಿರುವ ಧಾರುಣತೆಯನ್ನು ಕಾಣುತ್ತಿದ್ದೇವೆ ಎಂದು ಸಾಹಿತಿ ರೂಪ ಹಾಸನ ಕಳವಳ ವ್ಯಕ್ತಪಡಿಸಿದರು.
ನಗರದ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಹೊರತಂದಿರುವ ಟಿ.ಜಿ.ಎಸ್.ಅವಿನಾಶ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಯಲ್ಲಿ ರಚನಾತ್ಮಕ, ಕ್ರಿಯಾಶೀಲ ಹಾಗೂ ಪ್ರಕೃತಿಗೆ ಹತ್ತಿರವಾದ ಪ್ರಯೋಗಗಳನ್ನು ಇಂದು ಮಾಡಬೇಕು. ಪ್ರಕೃತಿ ಧರ್ಮವನ್ನು ಅರಿಯಬೇಕು; ಅನುಸರಿಸಬೇಕು. ನಮ್ಮೊಂದಿಗಿರುವ ಜೀವವೈವಿಧ್ಯವನ್ನೂ ತಿಳಿದುಕೊಳ್ಳಬೇಕು. ಪ್ರಾಕೃತಿಕ ಸಂರಚನೆ ಇರುವುದು ನಮಗಾಗಿ ಮಾತ್ರವೇ ಎಂದು ಭಾವಿಸಿದ್ದೇವೆ. ಆದರೆ, ಮನುಷ್ಯನು ಜೀವ ವಿಕಸನ ಪ್ರಕ್ರಿಯೆಯಲ್ಲಿ ಈಚೆಗೆ ಬಂದವರು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳಿಗೆ ಪ್ರಕೃತಿಯ ಬಗ್ಗೆ ಅರ್ಥ ಮಾಡಿಸಬೇಕು. ಇಲ್ಲದಿದ್ದರೆ ಮನುಷ್ಯ ಸಂತತಿಗೆ ಹೆಚ್ಚು ಉಳಿಗಾಲವಿಲ್ಲ ಎಂದರು.
ನಾವಿಂದು ಪರಿಸರದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ರೈತರ ಆತ್ಮಹತ್ಯೆ ಪ್ರಕರಣಗಳು ಬೇಸಾಯದ ಬದುಕಿನ ತಲ್ಲಣಗಳ ಪ್ರತಿರೂಪವಾಗಿವೆ. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪತೀತ್ಯವು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು. ಪ್ರಕೃತಿಗೆ ಹತ್ತಿರವಾದ ನೈಸರ್ಗಿಕ ಮೂಲದ ಕೃಷಿಯನ್ನು ಬೆಂಬಲಿಸುತ್ತೇವೆ ಎಂಬುದನ್ನು ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ತಿಳಿಸಬೇಕು. ಸಾಮುದಾಯಿಕ ಹಾಗೂ ಸಂಘಟನಾತ್ಮಕ ಕೃಷಿ ಪ್ರಜ್ಞೆ ಬೆಳೆಸಬೇಕು. ಎಲ್ಲೆಲ್ಲಿ ಸರ್ಕಾರಿ ಜಾಗ ಲಭ್ಯವಿದೆಯೋ ಅಲ್ಲಿ ‘ಬೆಳಕಿನ ಬೇಸಾಯ’ ಪ್ರಯೋಗಗಳನ್ನು ಮಾಡಬೇಕು. ಇದಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಸರ್ಕಾರ ಬೆಂಬಲ ನೀಡಬೇಕು. ಇದಕ್ಕೆ ಬೆಳಕು ತೋರುವಲ್ಲಿ ‘ಬೆಳಕಿನ ಬೇಸಾಯ’ ಕೃತಿಯು ಸಹಕಾರಿಯಾಗಿದೆ ಎಂದು ಹೇಳಿದರು.
ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕೃಷಿಯು ಸುಲಭವಲ್ಲ. ವಿಪರೀತ ತಾಳ್ಮೆ ಮತ್ತು ಶ್ರಮವನ್ನು ಬೇಡುತ್ತದೆ. ಇದಕ್ಕಾಗಿ ದೃಢ ನಿಶ್ಚಯವೂ ಇರಬೇಕಾಗುತ್ತದೆ. ನಾವು ನಿಸರ್ಗದ ಚಕ್ರವರ್ತಿಗಳೂ ಅಲ್ಲ, ಸಾಮ್ರಾಟರೂ ಅಲ್ಲ. ಅದರ ಒಂದು ಭಾಗವಷ್ಟೆ. ಅನ್ನವನ್ನು ಚಿನ್ನ ಮಾಡುವ ದುರಾಸೆ ಸಲ್ಲದು. ಪ್ರಕೃತಿಯಲ್ಲಿರುವ ಎಲ್ಲವನ್ನೂ ದೇವರೆಂದು ಭಾವಿಸಬೇಕು ಎಂದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರೈತರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸುವ ಕೆಲಸ ನಡೆಯಬೇಕಿದೆ ಎಂದರು.
ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ಬೇಸಾಯದ ಮೇಲೆ ಹಲವು ವಿಷಯಗಳಲ್ಲಿ ಬೆಳಕು ಚೆಲ್ಲುವ ಕೆಲಸವನ್ನು ಬೆಳಕಿನ ಬೇಸಾಯ ಕೃತಿಯು ಮಾಡಿದೆ ಎಂದು ತಿಳಿಸಿದರು.
ಲೇಖಕ ಟಿ.ಜಿ.ಎಸ್.ಅವಿನಾಶ್, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ಪತ್ರಕರ್ತ ಡಿ.ಆರ್.ಅಶೋಕ್ ರಾಮ್, ಹಿರಿಯ ಸಾಹಿತಿ ದೇವನೂರ ಮಹಾದೇವ, ಪ್ರೊ.ಸುಮಿತ್ರಾ ಬಾಯಿ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.





