Mysore
28
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಹಳೇದ್ವೇಷ: ರೌಡಿಶೀಟರ್ ಕೊಲೆ

ವರದಿ: ಮೋಹನ್ ಬಿ.ಟಿ

ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಭಾರತೀನಗರ ಸಮೀಪದ ದೊಡ್ಡರಸಿನಕೆರೆಯಲ್ಲಿ ನಡೆದಿದೆ.

ಗ್ರಾಮದ ಅರುಣ್ ಅಲಿಯಾಸ್ ಕಪ್ಪ (೨೩) ಎಂಬಾತನೇ ಹತ್ಯೆಯಾದ ರೌಡಿಶೀಟರ್. ಈತನ ಮೇಲೆ ಅದೇ ಗ್ರಾಮದ ದೊಡ್ಡಯ್ಯ (೨೫), ದೇವರಾಜು (೨೬) ಎಂಬುವರೇ ಹತ್ಯೆಗೈದ ಆರೋಪಿಗಳಾಗಿದ್ದಾರೆ.

ಘಟನೆ ವಿವರ:
ಹಳೇ ದ್ವೇಷದ ಹಿನ್ನೆಲೆಯಲ್ಲಿ ಅರುಣ ಹಾಗೂ ದೊಡ್ಡಯ್ಯ, ದೇವರಾಜು ಅವರ ನಡುವೆ ಭಾನುವಾರ ಸಂಜೆ ಗ್ರಾಮದಲ್ಲಿ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ ಕಾರಣ ಅರುಣನ ಮುಖ ಮತ್ತು ಇತರ ಕಡೆಗಳಿಗೆ ದೇವರಾಜು ಮತ್ತು ದೊಡ್ಡಯ್ಯ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ಅರುಣನ ಮುಖ, ಕೈಕಾಲುಗಳಿಗೆ ಗಾಯಗಳಾಗಿದ್ದವು. ಮೂಗಿನಿಂದ ರಕ್ತ ಸೋರುತ್ತಿತ್ತು. ಬಳಿಕ ಆತ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಬೈಕ್‌ನಲ್ಲಿ ಹೋಗುತ್ತಿದ್ದ.

ಬೈಕ್‌ನಲ್ಲಿ ಹೋಗುತ್ತಿದ್ದ ಅರುಣನನ್ನು ಹಿಂಬಾಲಿಸಿದ ದೊಡ್ಡಯ್ಯ ಹಾಗೂ ದೇವರಾಜು ಅವರು, ಎತ್ತಿನ ಗಾಡಿಯ ಚಕ್ರಕ್ಕೆ ಸಿಲುಕಿಸುವ ಕೊಂಡಿಯಿಂದ ಅರುಣನ ಮೇಲೆ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿ ಕುಸಿದುಬಿದ್ದಿದ್ದ. ತಕ್ಷಣ ಸಾರ್ವಜನಿಕರು ಆತನನ್ನು ಭಾರತೀಗರದ ಜಿ. ಮಾದೇಗೌಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅರುಣ ಸೋಮವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಯಿತು. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!