Mysore
25
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ನೀರು ಸೋರಿಕೆ; ತಜ್ಞರ ತಂಡದಿಂದ ಮಣ್ಣು ಪರೀಕ್ಷೆ

ಮೈಸೂರು: ಕುಕ್ಕರಹಳ್ಳಿ ಕೆರೆಗೆ ಏರಿಯಲ್ಲಿ ಕಾಣಿಸಿಕೊಂಡಿರುವ ನೀರು ಸೋರಿಕೆಯಿಂದ ಕೆರೆಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿರುವ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ (ಕೆಇಆರ್‌ಎಸ್) ತಂಡ ಇಲ್ಲಿನ ಮಣ್ಣಿನ ಪರೀಕ್ಷೆ ಮಾಡಿ 10 ದಿನಗಳಲ್ಲಿ ವರದಿ ನೀಡುವುದಾಗಿ ತಿಳಿಸಿದೆ.

ಕೆಇಆರ್‌ಎಸ್‌ನ ನಿರ್ದೇಶಕ ಡಾ.ಮಹೇಶ್ ಅವರ ನೇತೃತ್ವದಲ್ಲಿ ಇಂಜಿನಿಯರ್‌ಗಳಾದ ಗೋವಿಂದರಾಜು, ಸತ್ಯ ನಾರಾಯಣ ಸೇರಿದಂತೆ 9 ಇಂಜಿನಿಯರ್ ತಜ್ಞರ ತಂಡ ಶನಿವಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಂಪೂರ್ಣ ಕೆರೆಯ ಏರಿಯನ್ನು ಸುತ್ತು ಹಾಕಿ ಪರಿಶೀಲನೆ ನಡೆಸಿರುವ ತಂಡ ಕೆರೆಗೆ ಯಾವುದೇ ಅಪಾಯವಿಲ್ಲ. ಕೆರೆಯ ಬಂಡ್‌ಗಳಲ್ಲಿ ಯಾವುದೇ ಕ್ಯ್ರಾಕ್ಸ್ ಇಲ್ಲ. ಒಂದೆರಡು ಕಡೆ ಮಾತ್ರ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಬಂಡ್‌ಗಳು ಜಿನುಗಿದೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಕೆರೆಗೆ ನೀರು ಪ್ರವೇಶವಾಗುವ ಜಾಗ ಮತ್ತು ಹೊರ ಹೋಗುವ ಜಾಗವನ್ನು ತಂಡ ಪರಿಶೀಲಿಸಿದ್ದು, ಕಳೆದ ಹತ್ತು ದಿನಗಳಿಂದ ಕೆರೆಗೆ ಅಪಾಯವಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದ ಆತಂಕ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರು ವಿವಿ, ತಜ್ಞರ ತಂಡದ ಮೂಲಕವೇ ಪರಿಶೀಲನೆಗೆ ನಿರ್ಧರಿಸಿತ್ತು.

ಸಾಮಾನ್ಯವಾಗಿ ಹೆಚ್ಚು ಮಳೆ ಬಂದ ಸಂದರ್ಭದಲ್ಲಿ ಕೆರೆಗೆ ಹೆಚ್ಚು ನೀರು ಹರಿದು ಬಂದು, ಇಲಿ, ಹೆಗ್ಗಣಗಳು ಸೃಷ್ಟಿಸಿದ ಬಿಲಗಳ ಮೂಲಕ ನೀರು ಸೋರಿಕೆಯಾಗುತ್ತವೆ. ಮರಗಳು ಉರುಳಿಬಿದ್ದು, ಬೇರುಗಳು ಒಣಗಿದ ಸಂದರ್ಭದಲ್ಲಿ ನೀರು ಹರಿಯುತ್ತದೆ. ಆದರೆ, ಕೆರೆಯ ಆವರಣದಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ. ಹೀಗಾಗಿ, ಅಪಾಯದ ಸಾಧ್ಯತೆಯೂ ಕಡಿಮೆ ಮುಂದಿನ 10 ದಿನಗಳ ಒಳಗಾಗಿ ವಿಸ್ಕೃತ ವರದಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಜ್ಞರ ತಂಡದ ಸದಸ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ತಂಡವು ಕೆರೆಯ ಏರಿ ಕೆಳಭಾಗ, ಮೇಲ್ಭಾಗ ಮತ್ತು ಮಧ್ಯಭಾಗದಲ್ಲಿ ಮಣ್ಣು ಪಡೆದು, ಅದರ ಗಟ್ಟಿತನ, ಗುಣಮಟ್ಟ ಪರಿಶೀಲಿಸಿದ್ದಾರೆ. ಮಳೆಯಾದ ಸಂದರ್ಭದಲ್ಲಿ ಹೆಚ್ಚು ನೀರು ಹರಿದು ಬಂದ ಸಂದರ್ಭದಲ್ಲಿ ಏರಿಯಲ್ಲಿ ನೀರು ಸೋರಿಕೆಯಾಗುವುದು ಸಾಮಾನ್ಯ. ಕೆರೆಯ ದಕ್ಷಿಣ ಭಾಗದ ಉದ್ದಕ್ಕೂ ತೆರಳಿದ ವೇಳೆ ಏರಿಯಲ್ಲಿ ಯಾವುದೇ ಬಿರುಕು ಕಂಡುಬಂದಿಲ್ಲ. ಯಾವುದೇ ಆತಂಕ ಬೇಡ ಎಂದು ತಜ್ಞರ ತಂಡ ತಿಳಿಸಿದೆ ಎಂದು ಪರಿಸರ ಸಂರಕ್ಷಕ ಪ್ರೊ.ಕೆ.ಎಂ.ಜಯರಾಮಯ್ಯ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!