ನಂಜನಗೂಡು: ಸತತವಾಗಿ ನಾಲ್ಕು ದಿನಗಳಿಂದ ಸುರಿಯುತ್ತಿದ ಭಾರಿ ನಂಜನಗೂಡಿನ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿದೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ, ಮನೆಗಳು ಕುಸಿದು ಜನರ ಬದುಕು ಚಿಂತಾಜನಕವಾಗಿದೆ.
ರಾಜ್ಯಾದ್ಯಂತ ನಿರಂತರವಾಗಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನಂಜನಗೂಡಿನ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಜನತೆ ಶೋಚನೀಯ ಸ್ಥಿತಿ ತಲುಪಿದ್ದಾರೆ. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ನೀಲಕಂಠ ನಗರ ಬಡಾವಣೆಯ ಹಲವಾರು ಮನೆಯ ಗೋಡೆಗಳು ಶಿಥಿಲಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ವಸ್ತುಗಳಿಗೆಲ್ಲ ಹಾನಿ ಉಂಟಾಗಿದ್ದು ರಾತ್ರಿ ಇಡೀ ನಿದ್ರೆ ಇಲ್ಲದೇ ಮನೆಯ ಮಾಲೀಕರು ಮಳೆಯ ನೀರನ್ನು ಹೊರಗೆ ಹಾಕುತ್ತಿರುವುದು ಕಂಡುಬಂತು.
ಶಾಲೆಗೆ ನುಗ್ಗಿದ ನೀರು : ಸಿಂಧುವಳ್ಳಿ ಗ್ರಾಮದ ಪಕ್ಕದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಶಾಲೆಗೆ ರಜೆಯನ್ನು ನೀಡಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮೂಕನಕಟ್ಟೆ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಮೊರಾರ್ಜಿ ದೇಸಾಯಿ ಶಾಲೆಯ ಭೋಜನಾಲಯ ಬಾಲಕರ ವಸತಿ ನಿಲಯ ಹಾಗೂ ಶೌಚಾಲಯಗಳಲ್ಲಿ ನೀರು ನುಗ್ಗಿ ಅವಾಂತರವನ್ನು ಸೃಷ್ಟಿ ಮಾಡಿದ್ದು ತಾಲ್ಲೂಕಿನ ವಿವಿಧೆಡೆ ಹಲವು ಶಾಲೆಗಳು ಮತ್ತು ಅಂಗನವಾಡಿಗಳ ಗೋಡೆಗಳು ಶಿಥಿಲ ವ್ಯವಸ್ಥೆಯಿಂದ ಕೂಡಿದೆ.





