ಬೆಂಗಳೂರು : ಕನ್ನಡದ ಜನಪ್ರಿಯ ನಟ, ಸಂಗೀತ ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ಸಾಧು ಕೋಕಿಲಾ ಹಾಗೂ ನಟ ಮಂಡ್ಯ ರಮೇಶ್ ವಿರುದ್ಧ ಮಾಡಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಉಚ್ಚ ನ್ಯಾಯಲಯ ರಿಲೀಫ್ ನೀಡಿದೆ.
2017ರಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸಾಕ್ಷ್ಯಧಾರ ಕೊರತೆ ಹಿನ್ನೆಲೆಯಲ್ಲಿ ರದ್ದು ಮಾಡಿ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಆ ಮೂಲಕ ಕನ್ನಡದ ಹಿರಿಯ ನಟರು ನಿರಾಳವಾಗಿದ್ದಾರೆ. 2017ರಲ್ಲಿ ಸಾಧು ಕೋಕಿಲಾ ಮತ್ತು ನಟ ಮಂಡ್ಯ ರಮೇಶ್ ಅವರು ಮೈಸೂರಿನ ಪಾರ್ಲರ್ವೊಂದರಲ್ಲಿ ಮಸಾಜ್ ಮಾಡಿಸಿಕೊಂಡಿದ್ದರು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇಬ್ಬರು ನಟರು ತನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪವನ್ನು ಮಾಡಿ, ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಆ ಸಮಯದಲ್ಲಿ ಪ್ರಕರಣ ಸಂಬಂಧ ಇಬ್ಬರು ನಟರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. 2017ರಲ್ಲಿ ಉಚ್ಚ ನ್ಯಾಯಾಲಯ ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು. ಇದೀಗ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆ ಪ್ರಕರಣವನ್ನು ರದ್ದು ಮಾಡಲಾಗಿದೆ.
ಎಫ್ಐಆರ್ನಲ್ಲಿ ಹೆಸರಿಲ್ಲ, ಹಾಗೂ ಆರೋಪಕ್ಕೆ ಸಾಕ್ಷ್ಯಗಳಿಲ್ಲವೆಂದು ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲ ಪರವಾಗಿ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ವಾದ ಮಂಡಿಸಿದ್ದರು. ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಉಚ್ಚ ನ್ಯಾಯಾಲಯದ ಪೀಠ ಈ ಆದೇಶ ಹೊರಡಿಸಿದೆ.





