Mysore
23
light rain

Social Media

ಭಾನುವಾರ, 22 ಫೆಬ್ರವರಿ 2026
Light
Dark

ಓದುಗರ ಪತ್ರ | ಅನುತ್ತೀರ್ಣಗೊಳಿಸುವುದು ಸರಿಯಾದ ನಿರ್ಧಾರವಲ್ಲ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ ೫ನೇ ಮತ್ತು ೮ನೇ ತರಗತಿಗಳಲ್ಲಿ ಕಲಿಕಾ ಸಾಮರ್ಥ್ಯ ಇಲ್ಲದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂಬುದಾಗಿ ವರದಿಯಾಗಿದೆ. ಸರ್ಕಾರದ ಈ ನಿರ್ಧಾರ ಕಲಿಕಾ ಹಂತದಲ್ಲಿರುವ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಗಳಲ್ಲಿ ಕೀಳರಿಮೆಯ ಭಾವನೆ ಮೂಡಿ, ಅನುತ್ತೀರ್ಣಗೊಂಡಿದ್ದೇವೆ ಎಂದು ಆ ಮಕ್ಕಳು ಅನಾಹುತವನ್ನೂ ಮೈಮೇಲೆ ಎಳೆದುಕೊಳ್ಳಬಹುದು. ಇಲ್ಲವೇ ಅವರ ಪೋಷಕರು ಶಾಲೆ ಬಿಡಿಸಿ ವ್ಯವಸಾಯಕ್ಕೋ ಅಥವಾ ಇನ್ನಿತರ ಕೆಲಸಗಳಿಗೋ ಸೇರಿಸಬಹುದು. ಒಂದು ವೇಳೆ ಹೆಣ್ಣು ಮಕ್ಕಳು ಅನುತ್ತೀರ್ಣ ಗೊಂಡರಂತೂ ಅವರನ್ನು ಮದುವೆ ಮಾಡಿಬಿಡುತ್ತಾರೆ. ಇದರಿಂದಾಗಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಲು ಸರ್ಕಾರವೇ ಪರೋಕ್ಷವಾಗಿ ಕಾರಣವಾದಂತಾಗುತ್ತದೆ.

ಕಲಿಕಾ ಸಾಮರ್ಥ್ಯ ಕಡಿಮೆ ಇರುವ ಮಕ್ಕಳನ್ನು ಅನುತ್ತೀರ್ಣಗೊಳಿಸುವ ಬದಲು ಆ ಮಕ್ಕಳಿಗೆ ವಿಶೇಷ ತರಗತಿಗಳನ್ನು ಮಾಡಿ ಅವರ ಕಲಿಕಾ ಮಟ್ಟವನ್ನು ಹೆಚ್ಚಿಸಬೇಕು. ಅವರು ಯಾವ ವಿಷಯಗಳಲ್ಲಿ ಹಿಂದುಳಿದಿದ್ದಾರೆ ಆ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಮಾಡಬೇಕು. ಅದನ್ನು ಬಿಟ್ಟು ಆ ಮಕ್ಕಳನ್ನು ಅನುತ್ತೀರ್ಣ ಮಾಡುವುದರಿಂದ ಮಕ್ಕಳು ಹಾದಿ ತಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಈ ನಿರ್ಧಾರವನ್ನು ಕೈಬಿಡಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

 

Tags:
error: Content is protected !!