Mysore
33
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಕಂಸಾಳೆ ಕಲಾವಿದ ಮೈಸೂರು ಕುಮಾರಸ್ವಾಮಿ ನಿಧನ

ಮೈಸೂರು: ನಗರದ ಕಂಸಾಳೆ ಕಲಾವಿದ ಕುಮಾರಸ್ವಾಮಿ(73) ಸೋಮವಾರ ನಿಧನರಾದರು.

ಇವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಮಹಾದೇವ, ಇಬ್ಬರು ಪುತ್ರಿಯರು ಇದ್ದಾರೆ. ಜ.26ರಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಂಸಾಳೆ ಮಹಾದೇವಯ್ಯನವರ ಸುಪುತ್ರರಾದ ಕುಮಾರಸ್ವಾಮಿ ಅವರು 1951ರಲ್ಲಿ ಮೈಸೂರಿನ ಬಂಡಿಕೇರಿಯಲ್ಲಿ ಜನಿಸಿದ್ದರು. 7ನೇ ತರಗತಿ ವರೆಗೆ ವ್ಯಾಸಂಗ ಮಾಡಿರುವ ಇವರು, 9ನೇ ವರ್ಷಕ್ಕೆ ತಂದೆಯಿಂದ ಕಂಸಾಳೆ ಕಲೆ ಕಲಿತರು. ಈ ಮೂಲಕ ಬಾಲ್ಯದಿಂದಲೇ ತಂದೆ ಜತೆಗೆ ಜಾನಪದ ಕಲೆಯಾದ ಕಂಸಾಳೆಯನ್ನು ಮೈಗೂಡಿಸಿಕೊಂಡರು.

ದೆಹಲಿ, ಚೆನ್ನೈ, ಕೇರಳ, ಕೊಲ್ಕತ್ತ ಮಾತ್ರವಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ, ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕಂಸಾಳೆ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈ ವರೆಗೂ ಸಾವಿರಾರು ಮಕ್ಕಳಿಗೆ ಕಂಸಾಳೆ ಕಲೆಯನ್ನು ಹೇಳಿಕೊಟ್ಟಿದ್ದರು.

ನಟ ಶಿವರಾಜ್ ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರದ ಕೋಲುಮಂಡೆ ಹಾಡಿನ ಕಂಸಾಳೆ ಸಂಗೀತದ ನೃತ್ಯ ಸಂಯೋಜನೆ ಮಾಡಿ ಹೆಸರುವಾಸಿಯಾಗಿದ್ದರು. ಕರ್ನಾಟಕ ಜಾನಪದ ಅಕಾಡೆಮಿಯಿಂದ 2020ನೇ ಸಾಲಿನ ರಾಜ್ಯಮಟ್ಟ ಪ್ರಶಸ್ತಿಗೂ ಭಾಜನರಾಗಿದ್ದರು. ಜತೆಗೆ, ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

Tags:
error: Content is protected !!