ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಶೇ.60ರಷ್ಟು ಕಮಿಷನ್ ಎಂದು ಆರೋಪಿಸಿದ್ದು, ಇದೀಗ ಎಚ್ಡಿಕೆ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.7) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಒಳ್ಳೆಯ ಸಚಿವ ಸ್ಥಾನ ಸಿಕ್ಕಿದೆ. ಅವರು ಈಗ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಚುನಾವಣೆ ವೇಳೆ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುವುದು ಸಹಜ. ಆದರೆ ರಾಜ್ಯದಲ್ಲಿ ಚುನಾವಣೆ ಇನ್ನೂ ದೂರ ಇದೆ. ಹೀಗಾಗಿ ಶೇ.60ರಷ್ಟು ಕಮಿಷನ್ ಆರೋಪವನ್ನು ಬಿಟ್ಟು ಅಭಿವೃದ್ದಿ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿ ಎಂದು ವಾಗ್ದಾಳಿ ಮಾಡಿದ್ದಾರೆ.
ಕೇಂದ್ರ ಸಚಿವ ಎಚ್ಡಿಕೆ ಅವರು ಮೊದಲು ಕರ್ನಾಟಕ ರಾಜ್ಯಕ್ಕೆ ಏನು ಅಭಿವೃದ್ಧಿ ಮಾಡಬೇಕೆಂಬ ಕುರಿತಂತೆ ಚರ್ಚಿಸಬೇಕು. ಆದರೆ ಅವರು ಅದನ್ನು ಬಿಟ್ಟು ಶನಿವಾರ ಮತ್ತು ಭಾನುವಾರ ಬಂತೆಂದರೆ ರಾಜ್ಯಕ್ಕೆ ಬಂದು ರಾಜ್ಯ ಸರ್ಕಾರದ ವಿರುದ್ಧ ಇಂತಹ ಆರೋಪ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.





