Mysore
21
overcast clouds
Light
Dark

ಅನಿಮಲ್‌, ಟೈಗರ್‌ 3 ಪೋಸ್ಟರ್‌ ಕಿತ್ತೊಗೆದು ʼಯುವರತ್ನʼನ ಚಿತ್ರ ಬಿಡಿಸಿ ಪರಿವರ್ತನೆ ಪಾಠ ಮಾಡಿದ ಯೂತ್ಸ್‌

ʼಈ ಗೋಡೆ ಮೇಲೆ ಪೋಸ್ಟರ್‌ಗಳನ್ನು ಅಂಟಿಸಬಾರದುʼ ಎಂಬ ಬರಹ ಸರ್ವೇ ಸಾಮಾನ್ಯ. ಇದನ್ನು ಬಗೆಬಗೆಯಾಗಿ ಬೇಡಿಕೆ ರೂಪದಲ್ಲಿ ಹಾಗೂ ಎಚ್ಚರಿಕೆಯ ರೂಪದಲ್ಲಿ ಬರೆದರೂ ಸಹ ಯಾವುದೇ ಉಪಯೋಗವಾಗಿಲ್ಲ. ಇದನ್ನು ತಡೆಯುವ ಸಲುವಾಗಿಯೇ ಬೆಂಗಳೂರು ಮಹಾನಗರ ಪಾಲಿಕೆ ನಗರದ ಹಲವು ಗೋಡೆಗಳ ಮೇಲೆ ರಾಜ್ಯದ ಹಲವಾರು ಕವಿಗಳು, ಸಾಧಕರ ಚಿತ್ರಗಳನ್ನು ಬಿಡಿಸುವ ಯೋಜನೆಯನ್ನು ಆರಂಭಿಸಿತ್ತು. ಇದು ಸಫಲತೆಯನ್ನೂ ಸಹ ಕಂಡಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿನ ಗೋಡೆಗಳ ಮೇಲೆ ಬಿಬಿಎಂಪಿ ಇಂತಹ ಚಿತ್ರಗಳನ್ನು ಬಿಡಿಸಿದ್ದು, ಇದರಿಂದ ವಂಚಿತವಾದ ಗೋಡೆಗಳೇ ನಗರದಲ್ಲಿ ಹೆಚ್ಚಿವೆ. ಇಂತಹ ಗೋಡೆಗಳನ್ನು ಸ್ಥಳೀಯ ಚಿತ್ರಮಂದಿರಗಳು, ಉತ್ಪನ್ನಗಳ ಮಾರಾಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದು ತಮ್ಮ ಚಿತ್ರಗಳ ಹಾಗೂ ಉತ್ಪನ್ನಗಳ ಕುರಿತ ಪೋಸ್ಟರ್‌ಗಳನ್ನು ಅದರ ಮೇಲೆ ಅಂಟಿಸಿ ಪ್ರಚಾರ ಮಾಡುತ್ತಾ ಬರುತ್ತಿವೆ.

ಪೋಸ್ಟರ್‌ ಮೇಲೆ ಪೋಸ್ಟರ್‌ ಅಂಟಿಸಿ ಪರಿಸರ ಮಾಲಿನ್ಯ ಮಾಡುವುದರ ಜೊತೆಗೆ ನಗರದ ಸೌಂದರ್ಯವನ್ನೂ ಸಹ ಹಾಳು ಮಾಡಿದ್ದಾರೆ. ಇದೀಗ ಇಂತಹ ಚಟುವಟಿಕೆಗಳ ವಿರುದ್ಧ ‌ʼಯೂತ್‌ ಫಾರ್ ಪರಿವರ್ತನ್‌ʼ ಎಂಬ ತಂಡ ತೊಡೆ ತಟ್ಟಿದೆ. ವಿದ್ಯಾರ್ಥಿಗಳ ಈ ಗುಂಪು ಬೆಂಗಳೂರಿನ ಹಲವೆಡೆ ಈಗಾಗಲೇ ಹದಗೆಟ್ಟಿದ್ದ ಗೋಡೆಗಳಿಗೆ ಬಣ್ಣ ಹಚ್ಚಿ, ಸಾಧಕರ ಚಿತ್ರ ಬರೆದು ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.

ಇದೀಗ ಚಿಕ್ಕಲಸಂದ್ರ ಎಂಬ ಪ್ರದೇಶದಲ್ಲಿ ಈ ತಂಡ ಇಂತಹದ್ದೇ ಕೆಲಸವನ್ನು ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿನ ಗೋಡೆಯೊಂದರಲ್ಲಿ ಸ್ಥಳೀಯ ಚಿತ್ರಮಂದಿರಗಳು ಅಂಟಿಸಿದ್ದ ಸಿನಿಮಾಗಳ ಪೋಸ್ಟರ್‌ ಹಾಗೂ ಇತರೆ ಉತ್ಪನ್ನಗಳ ಪೋಸ್ಟರ್‌ಗಳನ್ನು ಕಿತ್ತು ಹಾಕಿರುವ ತಂಡ ಗೋಡೆಗೆ ಬಣ್ಣ ಬಳಿದು, ಅಂದದ ಚಿತ್ರಗಳನ್ನು ಬಿಡಿಸಿ, ಜತೆಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರವನ್ನೂ ಸಹ ರಚಿಸಿ ʼಸ್ವಚ್ಛ ಬೆಂಗಳೂರು ನಮ್ಮೆಲ್ಲರ ಜವಾಬ್ದಾರಿʼ ಎಂದು ಬರೆದು ಇತರರಿಗೆ ಮಾದರಿಯಾಗಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ