ಬೆಂಗಳೂರು: ನಾನು ಯಾವುದೇ ತನಿಖೆಗೂ ಸಿದ್ಧ, ಯಾವ ತನಿಖೆಗೂ ಹೆದರಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ರಾಜ್ಯದಲ್ಲಿ ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನ ಸಂಪುಟ ಸಭೆಯಲ್ಲಿ ಹಿಂಪಡೆಯುವ ಮೂಲಕ ತಾವು ತಪ್ಪಿತಸ್ಥರು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟ್ವಿಟ್ ಮಾಡಿರುವ ಅವರು, ತಮ್ಮದೇನೂ ತಪ್ಪಿಲ್ಲದಿದ್ದರೆ ಸಿಬಿಐ ತನಿಖೆ ಬಗ್ಗೆ ಭಯವೇಕೆ ಸಿದ್ದರಾಮಯ್ಯನವರೇ? ಈ ರೀತಿ ಅಡ್ಡದಾರಿ ಹುಡುಕಿ ಅನಿವಾರ್ಯವಾದದ್ದನ್ನ ಮುಂದೂಡಿ ರಾಜ್ಯದ ಜನರ ಮುಂದೆ ಇನ್ನಷ್ಟು ಸಣ್ಣವರಾಗುವ ಬದಲು, ಆದಷ್ಟು ಬೇಗ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಸಲಹೆಗಾರರು, ವಕೀಲರು, ಸುತ್ತ ಮುತ್ತ ಇರುವ ಹಿತಶತೃಗಳು ಈಗಾಗಲೇ ನಿಮ್ಮ ದಾರಿ ತಪ್ಪಿಸಿ ಮರ್ಯಾದೆ ಕಳೆದಿದ್ದಾರೆ. ಈಗ ಮತ್ತೊಮ್ಮೆ ಅವರನ್ನು ನಂಬಿ ತಪ್ಪು ಹೆಜ್ಜೆ ಇಡಬೇಡಿ. ರಾಜೀನಾಮೆ ನೀಡಿ ತನಿಖೆ ಎದುರಿಸುವುದು ಒಂದೇ ತಮ್ಮ ಮುಂದಿರುವ ಏಕೈಕ ದಾರಿ ಎಂದು ಹೇಳಿದ್ದಾರೆ.