ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಇಲ್ಲಸಲ್ಲದ ಮಾತು ಹೇಳಿ ಮರ್ಯಾದೆ ಕಳೆದುಕೊಳ್ಳುವುದು ಬೇಡ ಎಂದು ತಿರುಗೇಟು ನೀಡಿದರು.
ಇನ್ನು ಈ ಹಿಂದೆ ಮಣಿಕಂಠ ರಾಥೋಡ್ ವಿಚಾರದಲ್ಲಿ ಇದೇ ಬಿಜೆಪಿಯವರು ಕಲಬುರ್ಗಿಗೆ ಬಂದು ನನ್ನ ರಾಜೀನಾಮೆ ಕೇಳಿದ್ರು. ಆಮೇಲೆ ಏನ್ ಆಯ್ತು ಎಂದು ಪ್ರಶ್ನೆ ಮಾಡಿದರು.
ಮೊದಲು ನಾನು ಕೇಳಿದ ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರ ನೀಡಲಿ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ಪ್ರೂವ್ ಆಗಿದೆ. ಅದರ ಬಗ್ಗೆ ಮಾತನಾಡಿ. ಮುನಿರತ್ನ ಕೇಸ್, ಸಿ.ಟಿ.ರವಿ ಕೇಸ್ ಬಗ್ಗೆ ಏನ್ ಹೇಳ್ತಾರೆ. ನನ್ನ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಕಿಡಿಕಾರಿದರು.
ಕೋವಿಡ್ ಹಗರಣದ ಬಗ್ಗೆ ಕುನ್ನಾ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಹಲವರು ಅಕ್ರಮ ಮಾಡಿರುವ ಬಗ್ಗೆ ಸಾಬೀತಾಗಿದೆ ಎಂದು ತಿರುಗೇಟು ಕೊಟ್ಟರು.
ಇನ್ನು ಮುಂದುವರಿದು ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ನೋಟ್ನಲ್ಲಿ ನನ್ನ ಹೆಸರೇ ಇಲ್ಲ. ಹೆಣ ಬಿದ್ದಾಗ ಮಾತ್ರ ಬಿಜೆಪಿಗೆ ರಾಜಕೀಯ ಬರೋದು ಎಂದು ಕಿಡಿಕಾರಿದರು.





