Mysore
36
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

hd kumaraswamy

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು ಯಾಕೆ ಇನ್ನೂ ಸ್ಟೋರೇಜ್ ನಲ್ಲಿ ಇಟ್ಟುಕೊಂಡಿದ್ದೀರಿ? ಅಹಿಂದ ನಾಯಕ ಎನ್ನುವ ನೀವು ವರದಿ ಬಿಡುಗಡೆ ಮಾಡಿ ಅವಕಾಶ ವಂಚಿತ ಸಮುದಾಯಗಳಿಗೆ ಅನುಕೂಲ ಯಾಕೆ ಮಾಡಿಕೊಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮೀಕ್ಷೆ ನಡೆಸಲು ನೇಮಿಸಲಾಗಿದ್ದ ಕಾಂತರಾಜು ಆಯೋಗದ ವರದಿಯನ್ನು ಸ್ವೀಕರಿಸದೆ ಅದನ್ನು ಕುಮಾರಸ್ವಾಮಿ ತಡೆದು ಹಿಡಿದುಬಿಟ್ಟರು ಎಂದು ನನ್ನನ್ನು ಪದೇ ಪದೇ ದೂರುತ್ತಿದ್ದೀರಾ. ನಾನು ಮುಖ್ಯಮಂತ್ರಿಗಳನ್ನು ಕೇಳುವುದು ಇಷ್ಟೇ, ಇದೀಗ ಅವೆಲ್ಲ ನಿಮ್ಮ ಬಳಿಯೇ ಇದೇ, ಅದನ್ನು ಎಷ್ಟು ದಿನವೆಂದು ನಿಮ್ಮ ಬಳಿ ಇಟ್ಟುಕೊಳ್ಳುತ್ತೀರಿ? ಯಾಕೆ ವರದಿಗಳನ್ನು ಇನ್ನು ಬಿಡುಗಡೆ ಮಾಡಿಲ್ಲ? ಎಂದು ಪ್ರಶ್ನಿಸಿದರು.

ರಾಜ್ಯವು ಸಮೃದ್ಧವಾಗಿದೆ, ಇಡೀ ದೇಶದಲ್ಲಿ ತಲಾದಾಯ ಮಾನದಂಡದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ನೀವು ಹೇಳುತ್ತಿದ್ದೀರಿ. ಸರ್ಕಾರದ ಲೆಕ್ಕಗಳು ಪ್ರಕಾರ ರಾಜ್ಯದ ಜನರಿಗೆ ಯಾವುದೇ ಆರ್ಥಿಕ ಸಂಕಷ್ಟ ಇಲ್ಲ. ತಲಾದಾಯ ಚೆನ್ನಾಗಿದ್ದರೆ ಈ ಅಲ್ಪ ಪರಿಹಾರದ ಗ್ಯಾರಂಟಿಗಳನ್ನು ಕೊಡುವ ಅಗತ್ಯ ಏಕೆ? ಜನ ನೆಮ್ಮದಿಯಾಗಿ ಇದ್ದರೆ ಉಚಿತ ಕೊಡುಗೆಗಳ ಅಗತ್ಯ ಏತಕ್ಕೆ? ಯಾಕೆ ಇಂತಹ ಆತ್ಮವಂಚಕ ಹೇಳಿಕೆಗಳನ್ನು ಕೊಡುತ್ತೀರಿ? ಎಷ್ಟು ವರ್ಷ ಇಂತಹ ಉಚಿತ ಕೊಡುಗೆಗಳನ್ನು ಕೊಡಲು ಸಾಧ್ಯ? ಬೇರೆ ರಾಜ್ಯಗಳಲ್ಲಿ ಕೊಟ್ಟಿದ್ದಾರೆ ಎಂದು ಹೇಳುತ್ತೀರಿ, ಇನ್ನೊಂದು ಕಡೆ ಕೊಟ್ಟರೆ ನೀವು ಕೊಡಬೇಕು ಅಂತ ಏನಾದರೂ ಇದೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ ಎಂದು ಮಾಧ್ಯಮಗಳಲ್ಲಿ ದುರ್ಬೀನು ಹಾಕಿ ಹುಡುಕಿದರು ಏನೇನು ಸಿಗುವುದಿಲ್ಲ. ಗ್ಯಾರೆಂಟಿಗಳನ್ನು ಬಿಟ್ಟು ಉಳಿದಂತೆ ಏನು ಸಾಧನೆ ಮಾಡಿರುವುದು ತಿಳಿಯುವುದಿಲ್ಲ. ದೃಶ್ಯ ಮಾಧ್ಯಮಗಳನ್ನು ನೋಡಿದರೆ, ಪತ್ರಿಕೆಗಳನ್ನು ಓದಿದರೆ ಮುಖ್ಯಮಂತ್ರಿಗಳು ಕುರ್ಚಿಗೆ ಪ್ರಾಮುಖ್ಯತೆ ಕೊಟ್ಟಿರುವ ವರದಿಗಳಷ್ಟೇ ಕಣ್ಣಿಗೆ ಕಾಣುತ್ತದೆ. ಅದು ಬಿಟ್ಟರೆ ಭ್ರಷ್ಟಾಚಾರದ ಹಗರಣಗಳು ಹೆಜ್ಜೆ ಹೆಜ್ಜೆಗೂ ಗೋಚರವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!