ಮಂಗಳೂರು: ಧರ್ಮಸ್ಥಳದ ಬೆಳವಣಿಗೆಯಿಂದ ಪುರುಷರಿಗಿಂತ, ಮಹಿಳೆಯರೇ ಹೆಚ್ಚಾಗಿ ಕಣ್ಣೀರಿಟ್ಟಿದ್ದಾರೆ ಹಾಗೂ ವೇದನೆ ಪಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಇಂದು ನಡೆದ ಜೈನ ಮುನಿಗಳ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜೈನ ಮಠಗಳ ಭಟ್ಟಾರಕರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಇಂದು ಶ್ರೀ ಕ್ಷೇತ್ರಕ್ಕೆ ಬಹಳ ವಿಶೇಷವಾದ ಕಳೆ ಬಂದಿದೆ. ಇಷ್ಟೊಂದು ಆಶಯಧಾರಿಗಳು, ಆಶೀರ್ವವನ ನೀಡುತ್ತಿರುವುದು ತುಂಬಾ ದೊಡ್ಡದು. ಇಷ್ಟೊಂದು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದಿರೋದು ಸಂತಸ ತಂದಿದೆ. ಇಂದು ಮೂಡಬಿದ್ರೆ ಭಟ್ಟಾರಕರ ಪಟ್ಟಾಭಿಷೇಕದ ದಿನ ಅವರು ಕೂಡ ನಿಮ್ಮೊಂದಿಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಮಾತು ನನಗೆ ಬೇಡ ಎಂದರು.
ಎಸ್ಐಟಿ ತನಿಖೆ ನಡೆಯುತ್ತಿರುವುದಿರಂದ ಹೆಚ್ಚು ಮಾತನಾಡಬಾರದು ಎಂದು ಸಂದೇಶ ಆಗಿದೆ. ಆದರೆ ಭಕ್ತರೊಬ್ಬರು ನನಗೆ ಹೇಳುತ್ತಿದ್ದರು. ಈ ಬೆಳವಣಿಗೆ ಆದಾಗಿನಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಣ್ಣೀರು ಹಾಕಿದ್ದಾರೆ. ವೇದನೆ ಪಡುತ್ತಿದ್ದಾರೆ. ನಮಗೆ, ಕುಟುಂಬಕ್ಕೆ ನೆಮ್ಮದಿಯಿಲ್ಲ, ನೀವೇ ಏನಾದರೂ ಮಾಡಿ ಎಂದು ಹೇಳಿಕೊಂಡಿದ್ದಾರೆ. ಕೆಲ ಹೆಣ್ಣು ಮಕ್ಕಳು ಯಾವುದೇ ರೀತಿಯ ಹೋರಾಟಕ್ಕೆ ಪ್ರತಿಭಟನೆಗೆ ತಯಾರಿದ್ದಾರೆ. ಆದರೆ ಅಂತಹ ಹೋರಾಟದ ಅಗತ್ಯವಿಲ್ಲ. ಎಲ್ಲವೂ ಸ್ವಾಮಿ ಮೇಲೆ ಬಿಟ್ಟಿದ್ದೇವೆ. ಅದರ ಫಲ ಈಗ ಸಿಗುತ್ತದೆ ಎಂದು ತಿಳಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಜನಿವಾರ ಜಾತಿ ವೇಷಕ್ಕಲ್ಲ. ಮೂರು ಧರ್ಮಗಳನ್ನು ಆಚರಿಸೋದಕ್ಕಾಗಿ ಜನಿವಾರ ಧಾರಣೆ ಮಾಡುತ್ತೇವೆ. ಅದೇ ರೀತಿ ದಶಲಕ್ಷಣ ಇರೋದು ಪೂಜೆಗಲ್ಲ. ಪ್ರಾರ್ಥನೆ ಮಾಡೋಕೆ ಎಂದು ಹೇಳಿದರು.





