ದಾವಣಗೆರೆ : 2023 ರ ಚುನಾವಣೆಯಲ್ಲಿ ನಮ್ಮವರೇ ಬಿಜೆಪಿ ನೂರು ಸ್ಥಾನ ಬರಬಾರದು ಅಂತ ಕಾಯ್ತಾ ಇದ್ದರು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಒಂದಾಗಿ ಅವರೇ ಮುಖ್ಯಮಂತ್ರಿಯಾಗಬೇಕು ಅಂತ ಹಗಲು ಕನಸು ಕಾಣ್ತಾ ಇದ್ದರು. ಇದು ನನ್ನ ಹೆತ್ತ ತಾಯಿ ಆಣೆಗೂ ಸತ್ಯ. ಪಕ್ಷದಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅವರೆ ಇದ್ದರೆ ಮುಖ್ಯ ಮಂತ್ರಿ ಅಪೇಕ್ಷಿತರಾಗ್ತಾರೆ. ಹೀಗಾಗಿ ಅವರನ್ನ ಪಕ್ಷದಿಂದ ಹೊರಗಿಟ್ಟರು ಎಂದು ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಬೊಮ್ಮಾಯಿ ಬಲಿಪಶು ಮಾಡಿದ್ರು. ಬೊಮ್ಮಾಯಿ ಒಬ್ಬ ಅಪ್ರತಿಮ ಬುದ್ಧಿವಂತ. ಯಡಿಯೂರಪ್ಪ ಒಬ್ಬ ದಕ್ಷ ಹೋರಾಟಗಾರ. ಹಾಲುಮತದ ಸಮಾಜದ ಈಶ್ವರಪ್ಪ ಹೊರಗಿಟ್ಟರು, ಜಗದೀಶ್ ಶೆಟ್ಟರ್ನ ಸೈಡ್ ಲೈನ್ ಮಾಡಿದ್ರು ನಮ್ಮಲ್ಲಿ ಒಂದು ಕಾರ್ಪೋರೇಟ್ ಟೀಮ್ ಇದೆ. ಒಬ್ಬ ಸರ್ವಾಧಿಕಾರಿಯಿಂದಲೇ ಬಿಜೆಪಿ ಈ ಮಟ್ಟಕ್ಕೆ ಬಂದಿರೋದು. ಯಾವುದೋ ಸರ್ವಾಧಿಕಾರಿಗಳಿಗೆ ನಾನು ಜಗ್ಗಲ್ಲ ಬಗ್ಗಲ್ಲ ಎಂದು ಸ್ವಪಕ್ಷದವರ ವಿರುದ್ಧವೇ ಹರಿಹಾಯ್ದಿದ್ದಾರೆ.
ಅವರದೇ ಕಡೆಯವರು ರಾಜ್ಯಸಭಾ, ವಿಧಾನ ಪರಿಷತ್, ವಿಧಾನಸಭೆ ಸದಸ್ಯರಾಗಿದ್ದಾರೆ. ಅವರೇ ರಾಜ್ಯಾಧ್ಯಕ್ಷರು, ಯುವಮೋರ್ಚಾ, ಪದಾಧಿಕಾರಿಗಳು ಅವರ ಕಡೆಯವರೇ ಆಗಿದ್ದಾರೆ. ಸಮಯ ಬಂದಾಗ ಪಟ್ಟಿ ಸಮೇತ ಅವರ ಹೆಸರು ಬಿಡುಗಡೆ ಮಾಡ್ತೀನಿ ಎಂದು ಬಿಎಲ್ ಸಂತೋಷ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.





