Mysore
21
overcast clouds
Light
Dark

ವಾಲ್ಮೀಕಿ ಹಗರಣ, ಸದ್ಯದಲ್ಲೆ ಮೂರ್ನಾಲ್ಕು ಸಚಿವರ ವಿಕೆಟ್ ಬೀಳುತ್ತೆ : ಆರ್ .ಅಶೋಕ್ ಹೊಸ ಬಾಂಬ್

ಕೋಲಾರ : ವಾಲ್ಮೀಕಿ ಹಗರಣ ಸಂಬಂಧ ಈಗಾಗಲೇ ಒಂದು ವಿಕೆಟ್‌ ಬಿದ್ದಿದೆ. ಒಂದು ವಿಕೆಟ್‌ ಮಾತ್ರವಲ್ಲ ಇನ್ನೂ ಮೂರರಿಂದ ನಾಲ್ಕು ವಿಕೆಟ್‌ ಬೀಳಲಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಹೊಸ ಬಾಂಬ್‌ ಸಿಡಿಸಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಈಗಾಗಲೇ ಹಲವರನ್ನು ಬಂಧಿಸಿ ಕೆಲವೊಂದು ಮಾಹಿತಿ ಕಲೆಹಾಕುತ್ತಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಕೂಡ ರಾಜೀನಾಮೆ ನೀಡಿದ್ದಾರೆ. ಇನ್ನು ಈ ಪ್ರಕರಣ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಕೋಲಾರದಲ್ಲೂ ಕೂಡ ವಿಪಕ್ಷ ನಾಯಕ ಆರ್‌ ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಆರ್‌.ಅಶೋಕ್‌  , ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ಆಗಿದೆ. ಅದರಲ್ಲಿ ನಾಗೇಂದ್ರ ಪಾಲು 20 ಪರ್ಸೆಂಟ್ ಆದರೆ 80 ಪರ್ಸೆಂಟ್​ ಲೂಟಿ ಮಾಡಿರೋದು ಸಿದ್ದರಾಮಯ್ಯ ಹಾಗೂ ಅವರ​ ಗ್ಯಾಂಗ್​, ಅದಕ್ಕೆ ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಒಂದು ವಿಕೆಟ್​ ಬಿದ್ದಿರೋದಲ್ಲ ಇನ್ನು ಮೂರು ನಾಲ್ಕು ವಿಕೆಟ್​​ ಬೀಳೋದಿದೆ ಎಂದು ಸ್ಫೋಟಕ ಹೇಳಿಕೆ  ಕೊಟ್ಟಿದ್ದಾರೆ.

ಅಲ್ಲದೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೊಂದು ಲೂಟಿ ಸರ್ಕಾರ ಎಂದು ಜನಕ್ಕೆ ಈಗಾಗಲೇ ಅರ್ಥವಾಗಿದೆ. 2000 ರೂಪಾಯಿ ಹೆಸರಲ್ಲಿ ಜನರನ್ನು ಲೂಟಿ ಮಾಡಿದ್ದಾರೆ, ರಾಜ್ಯದಲ್ಲಿ ಡೆಂಗ್ಯೂ ಜ್ವರ ತಾಂಡವಾಡುತ್ತಿದೆ, ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕುಡಿಯೋ ನೀರು ಕೊಡಲು ಇವರ ಬಳಿ ಹಣ ಇಲ್ಲ. ರಾಜ್ಯದಲ್ಲಿ ಸರ್ಕಾರ ಪಾಪರ್ ಆಗಿದೆ ಎಂದು ಕಿಡಿಕಾರಿದರು.