ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಎಂಎಲ್ಸಿ ಸೂರಜ್ ರೇವಣ್ಣನನ್ನು ಮತ್ತೆ ಎರಡು ದಿನ ಸಿಐಡಿ ಕಸ್ಟಡಿಗೆ ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಸೂರಜ್ ರೇವಣ್ಣ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು(ಜು.1) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಯುವಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಅರೋಪದಡಿ ದಾಖಲಾದ ಪ್ರಕರಣದಲ್ಲಿ ಜೂನ್22ರಂದು ಸೂರಜ್ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 8 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದು ಅವರ ಕಸ್ಟಡಿ ಅಂತ್ಯವಾದ ಹಿನ್ನೆಲೆ, ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್ ಸೂರಜ್ಗೆ ಜುಲೈ 3ರವರೆಗೆ ಕಸ್ಟಡಿ ವಿಸ್ತರಿಸಿದೆ.
ಸೂರಜ್ ರೇವಣ್ಣರನ್ನು ಮತ್ತೆ ಆರು ದಿನ ಕಸ್ಟಡಿಗೆ ನೀಡುವಂತೆ ಎಸ್ಪಿಪಿ ಅಶೋಕ್ ನಾಯಕ್ ನ್ಯಾಯಾಧೀಶರಿಗೆ ಮನವಿ ಮಾಡಿದರು. ವಾಯ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಬೇಕಿದೆ, ಪ್ರತಿನಿತ್ಯ ಏನೆಲ್ಲಾ ತನಿಖೆ ನಡೆದಿದೆ, ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಎಂಟು ದಿನ ಕಸ್ಟಡಿಯಲ್ಲಿದ್ದಾಗ ಏನಾದೂ ತೊಂದರೆ ನೀಡಿದರಾ ಎಂದು ಸೂರಜ್ಗೆ ಜಡ್ಜ್ ಪ್ರಶ್ನೆ ಕೇಳಿದರು. ಯಾವುದೇ ತೊಂದರೆ ನೀಡಿಲ್ಲ ಎಂದು ಸೂರಜ್ ಉತ್ತರಿಸಿದ್ದಾರೆ. ಬಳಿಕ 2 ದಿನ ಕಸ್ಟಡಿ ವಿಸ್ತರಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.





