ಬೆಂಗಳೂರು: ಅವಿವಾಹಿತ ಹಾಗೂ ಅಕ್ರಮ ಸಂಬಂಧದಿಂದ ಗರ್ಭಧರಿಸಿ ಮಹಿಳೆಯರನ್ನು ಪತ್ತೆಹಚ್ಚಿ ಅವರು ಜನ್ಮ ನೀಡುವ ಮಕ್ಕಳನ್ನು ಪಡೆದು ಸಂತಾನಹೀನ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಪತ್ತೆ ಹಚ್ಚಿರುವ ತುಮಕೂರು ಜಿಲ್ಲೆಯ ಪೊಲೀಸರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಜಾಲವನ್ನು ಭೇಧಿಸಿರುವ ತುಮಕೂರು ಪೊಲೀಸರು, 7 ಮಂದಿ ಆರೋಪಿಗಳನ್ನು ಬಂಧಿಸಿ, 5 ಮಕ್ಕಳನ್ನು ರಕ್ಷಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಣಿಗಲ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಆಗಿ ಕೆಲಸ ಮಾಡುತ್ತಿರುವ ಯು.ಡಿ.ಮಹೇಶ್, ಮೆಹಬೂಬ್ ಷರೀಫ್ ಎಂಬ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಇಬ್ಬರನ್ನು, ಜಾತ್ರೆಗಳಲ್ಲಿ ಹಚ್ಚೆ ಬರೆಯುವ ಗುಬ್ಬಿ ತಾಲ್ಲೂಕಿನ ಚಿಕ್ಕಗುಡ್ಡ ಗ್ರಾಮದ ಕೆ.ಎನ್.ರಾಮಕೃಷ್ಣ, ತುಮಕೂರಿನ ಭಾರತಿ ನಗರದ ಹನುಮಂತರಾಜು, ನಾಗಮಂಗಲ ಮುಬಾರಕ್ ಪಾಶ, ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ಪೂರ್ಣಿಮಾ, ಶಿರಾ ನಗರದ ಸೌಜನ್ಯ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, 50 ಸಾವಿರ ರೂ ನಗದು ಹಾಗೂ ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ಜೂ.9 ರಂದು ಗುಬ್ಬಿ ನಗರದ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಹದೇವಿ ಎಂಬುವರು ಮಲಗಿದ್ದಾಗ ಆಕೆಯ 11 ತಿಂಗಳ ಗಂಡು ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಈ ಬಗ್ಗೆ ಮಹಿಳೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಗುಬ್ಬಿ ಪೊಲೀಸರು ತಾಂತ್ರಿಕ ಸಹಾಯದ ಆಧಾರದಲ್ಲಿ ಮಗುವನ್ನು ಕಳ್ಳತನ ಮಾಡಿದ ರಾಮಕೃಷ್ಣ ಹಾಗೂ ಹನುಮಂತರನ್ನು ಬಂಧಿಸಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಮಗುವನ್ನು ಬೆಳ್ಳೂರು ಕ್ರಾಸ್ನ ಮುಬಾರಕ್ ಅವರಿಗೆ 1.75 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾಗಿ ವಿವರಿಸಿದ್ದಾರೆ.
ಆರೋಪಿಗಳು ಮಕ್ಕಳನ್ನು 2 ರಿಂದ 3 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಈವರೆಗೂ 9 ಮಕ್ಕಳನ್ನು ಮಾರಾಟ ಮಾಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು 5 ಮಕ್ಕಳನ್ನು ಸಂರಕ್ಷಿಸಿದ್ದಾರೆ. ಒಂದು ಮಗು ಮೃತಪಟ್ಟಿದ್ದು, ಇನ್ನೊಂದನ್ನು ಪೋಷಕರಿಗೆ ವಾಪಸ್ ನೀಡಲಾಗಿದೆ.
ಸಂರಕ್ಷಿಸಲಾದ 5 ಮಕ್ಕಳಲ್ಲಿ 4 ಮಕ್ಕಳು ಕಲ್ಯಾಣ ಕೇಂದ್ರದ ಆಶಯದಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಆರೋಪಿಗಳು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.





