Mysore
19
overcast clouds
Light
Dark

ಪಿಎಸ್‌ಐ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಿ: ಆರ್‌.ಅಶೋಕ್‌ ಆಗ್ರಹ

ಯಾದಗಿರಿ: ಯಾದಗಿರಿ ಠಾಣೆ ಪಿಎಸ್‌ಐ ಪರಶುರಾಮ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿರುವ ವಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯದ ಕಾಂಗ್ರೆಸ್‌ ಆಡಳಿತದಲ್ಲಿ ದಲಿತರು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದರು.

ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಅವರ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಭೇಟಿ ನೀಡಿ ಮೃತ ಪರಶುರಾಮ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಅಧಿಕಾರಿಗಳ ಸಾವಾಗುತ್ತಿದೆ. ವಾಲ್ಮೀಕಿ ನಿಗಮದ ಚಂದ್ರಶೇಖರ್‌ ನಂತರ ಈಗ ಪಿಎಸ್‌ಐ ಪರಶುರಾಮ್‌ ಸಾವಾಗಿದೆ. ನಮ್ಮ ಕ್ಷೇತ್ರದಲ್ಲಿ ದಲಿತರು ಇರಬಾರದು ಎಂದು ಯಾದಗಿರಿ ಶಾಸಕರು ಹೇಳಿದ್ದಾರೆಂದು ಪರಶುರಾಮ್‌ ಕುಟುಂಬ ಆರೋಪಿಸಿದೆ. ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿಯೇ ನಾವೆಲ್ಲರೂ ಬದುಕುತ್ತಿದ್ದರೂ ಈ ರೀತಿಯ ಹೇಯ ಕೃತ್ಯ ನಡೆಯುತ್ತಿದೆ ಎಂದು ಬೇಸರಿಸಿದರು.

ದಲಿತ ಕುಟುಂಬದ ಹೆಣ್ಣುಮಗಳಿಗೆ (ಪರಶುರಾಮ್‌ ಪತ್ನಿ) ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹಾಲಪ್ಪ ಆಚಾರ್, ರಾಜ್ಯ ಉಪಾಧ್ಯಕ್ಷರಾದ ರಾಜು ಗೌಡ, ವಿಧಾನ ಸಭಾ ವಿರೋಧ ಪಕ್ಷ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags: