Mysore
36
clear sky

Social Media

ಗುರುವಾರ, 26 ಮಾರ್ಚ್ 2026
Light
Dark

ಬಜೆಟ್‌ ಕುರಿತು ನಡೆದ ಚರ್ಚೆಯ ಮೇಲಿನ ಉತ್ತರ ಪ್ರಮುಖ ಅಂಶಗಳಿವು.!

cm siddaramaiah

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ವಿಧಾನಪರಿಷತ್ತಿನಲ್ಲಿ ಬಜೆಟ್ ಕುರಿತು ನಡೆಸಿದ ಚರ್ಚೆಯ ಮೇಲಿನ ಉತ್ತರದ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.

2026-27ನೇ ಬಜೆಟ್ ಬಗ್ಗೆ ಮಾತನಾಡಿದ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ವಿಮರ್ಶೆ, ಟೀಕೆಗಳನ್ನು, ಸ್ವಾಗತವನ್ನು ಅಭಿನಂದಿಸುತ್ತೇನೆ. ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳು ನಿಖರ ಮತ್ತು ವಾಸ್ತವವಾಗಿದೆ. ಜಿಎಸ್ ಟಿ ಪರಿಹಾರ ಹಾಗೂ ಕೇಂದ್ರ ಅನುದಾನ ಕೇಂದ್ರದಿಂದ ಅನುದಾನ ಬಂದಿಲ್ಲ. ಇವೆಲ್ಲದ್ದರಿಂದ ಬಜೆಟ್ ರೆವಿನ್ಯೂ ಢೆಪಿಸಿಟ್ ಆಗಿದೆಯೇ ಹೊರತು ಸರ್ಕಾರ ಸಮರ್ಪಕವಾಗಿ ಆರ್ಥಿಕತೆಯನ್ನು ನಿಭಾಯಿಸಿದೆ.

ಕರ್ನಾಟಕಕ್ಕೆ 14ನೇ ಆಯೋಗದಲ್ಲಿ 4.713 ರಷ್ಟು ಪಾಲು ದೊರೆಕಿತ್ತು. ಆದರೆ 15ನೇ ಹಣಕಾಸಿನ ಆಯೋಗದಲ್ಲಿ 3.647 ರಷ್ಟಾಗಿ, 1.1ರಷ್ಟು ಕಡಿಮೆಯಾಗಿ ಅನ್ಯಾಯವಾಗಿತ್ತು. ಇದರಂತೆ 11495 ಕೋಟಿ ರಾಜ್ಯಕ್ಕೆ ಖೋತಾ ಆಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು. ಕೇಂದ್ರ ಸರ್ಕಾರ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ 5300 ಕೋಟಿ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಲಿಲ್ಲ. ಆಗಿದ್ದ ರಾಜ್ಯದ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವುದಾಗಿ ತಿಳಿಸಿದರು. ಆದರೆ ಈ ಯಾವ ಘೋಷಣೆಗಳು ಫಲ ಕಾಣಲಿಲ್ಲ. ಆದ್ದರಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿಯವರೂ ಪ್ರಶ್ನಿಸಬೇಕು. ಆದ್ದರಿಂದ ಸರ್ವಪಕ್ಷದ ನಿಯೋಗದಲ್ಲಿ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಮನವಿ ಮಾಡಿಕೊಳ್ಳಬೇಕಿದೆ.

ವಿರೋಧಪಕ್ಷದವರು, ಈ ಬಾರಿಯ ಬಜೆಟ್ ರೆವಿನ್ಯೂ ಡೆಫಿಸಿಟ್ ಎಂದು ಟೀಕಿಸುತ್ತಾರೆ. ಆದರೆ ಇದಕ್ಕೆ ಮೂಲ ಕಾರಣ, ಕೇಂದ್ರ ಸರ್ಕಾರವು ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಆದ ಅನ್ಯಾಯ, ಜಿಎಸ್ ಟಿ ಪರಿಷ್ಕರಣೆಯಿಂದ 10 ಸಾವಿರ ಕೋಟಿ ಖೋತಾ, ಜೆಜೆಎಂನಲ್ಲಿ 15 ಸಾವಿರ ಕೋಟಿ ಖೋತಾ, ಜಿಎಸ್ ಟಿ ಪರಿಹಾರ ಸ್ಥಗಿತ ಮಾಡಿರುವುದರಿಂದಲೇ ಆಗಿದೆ.

ತೆರಿಗೆ ಸಂಗ್ರಹದ ಗುರಿಗಳು ಅವೈಜ್ಞಾವಿಕವಾಗಿದೆ ಎಂದು ಟೀಕೆ ಬಂದಿದೆ. 2025-26 ರಲ್ಲಿ ಗುರಿಯು 120,000 ಕೋಟಿ, 2026-27 ರಲ್ಲಿ 1,25,000 ಕೋಟಿ, 2025-26 ರಲ್ಲಿ ಅಬಕಾರಿ ತೆರಿಗೆ 40 ಸಾವಿರ ಕೋಟಿ, 2026-27 ಕ್ಕೆ 45 ಸಾವಿರ ಕೋಟಿ, ನೋಂದಣಿ ಇಲಾಖೆಯಡಿ 2026-27ಕ್ಕೆ 29000 ಕೋಟಿ, ಮೋಟಾರು ವಾಹನ 15500 ಕೋಟಿಗಳ ತೆರಿಗೆಯ ಗುರಿಯನ್ನು ನೀಡಲಾಗಿದ್ದು, ಅವೈಜ್ಞಾನಿಕ ಗುರಿ ನಿಗದಿ ಮಾಡಿರುವುದಿಲ್ಲ.

ಗ್ಯಾರಂಟಿ ಯೋಜನೆಗಳಿಂದ ಸಾಲ ಮಾಡಬೇಕಾಗಿ ಬಂದಿದೆ ಎಂಬ ಟೀಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ಸಮಾಜದ ಮನುವಾದದ ಪ್ರಕಾರ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ , ಶಿಕ್ಷಣ ಶಕ್ತಿ ದೊರೆತಿರಲಿಲ್ಲ. ಪ್ರಧಾನಿ ಮೋದಿಯವರು ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಮಾಡಿದ್ದಾರೆ. ನಾವು ಸಂಪನ್ಮೂಲ ಕ್ರೋಡೀಕರಣಕ್ಕೆ ಕೆಲವೊಂದು ಬೆಲೆ ಏರಿಸಿದ್ದರೂ ಕೂಡ, ವಿವಿಧ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ದರ ಏರಿಕೆ ಕಡಿಮೆಯೇ ಇದೆ.

ಗ್ಯಾರಂಟಿಗಳಿಗೆ 2026-27 ರಲ್ಲಿ 51286 ಕೋಟಿ ನಿಗದಿಪಡಿಸಲಾಗಿದೆ. ಮಾರ್ಚ್ 2026ರವರೆಗೆ 1,31,000 ಕೋಟಿ ಗ್ಯಾರಂಟಿಗಳಿಗೆ ನೀಡಲಾಗಿದೆ. ನಮ್ಮ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು, ನಮ್ಮ ಗ್ಯಾರಂಟಿಗಳನ್ನೇ ಇತರೆ ರಾಜ್ಯಗಳಲ್ಲಿ ಅನುಸರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಡ್ಲಿ ಬೆಹನ್ ಯೋಜನೆಯಲ್ಲಿ 1,500 ರೂ ಮಾಸಿಕ ನೀಡುತ್ತಿದ್ದಾರೆ. ಇಂತಹ ಜನಪರ ಯೋಜನೆಗಳಿಗೆ ಮುಂದಿನ ವರ್ಷದಿಂದ ಅನುದಾನ ಕಡಿಮೆ ಮಾಡಿದರು.

ಇದರಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕಿಸುತ್ತಾರೆ. ಆದರೆ 2025-26 ರಲ್ಲಿ ಬಂಡವಾಳ ವೆಚ್ಚ 83200 ಕೋಟಿ ಇಡಲಾಗಿದ್ದು, 2026-27ಕ್ಕೆ ಸುಮಾರು 84567 ಕೋಟಿಗಳನ್ನು ಬಂಡವಾಳ ವೆಚ್ಚಕ್ಕೆ ಇಡಲಾಗಿದೆ. ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ನಮಗಿಂತ ಕಡಿಮೆ ಬಂಡವಾಳ ವೆಚ್ಚವಿದೆ. ನಮ್ಮ ಸರ್ಕಾರ ಅಭಿವೃದ್ಧಿಯ ನೀರಾವರಿ, ಸಮಾಜ ಕಲ್ಯಾಣ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಿಗೆ ಅನುದಾನವನ್ನು ಕಡಿಮೆ ಮಾಡಿಲ್ಲ ಎಂದು ಹೇಳಿದರು.

 

Tags:
error: Content is protected !!