ಬೆಂಗಳೂರು: ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಭಾಷೆಯಾಗಿ ಮಲೆಯಾಳಂ ಕಡ್ಡಾಯ ಕಲಿಕೆ ಮಸೂದೆ ಜಾರಿಗೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮಲೆಯಾಳಂ ಕಡ್ಡಾಯ ಮಾಡದಂತೆ ತಿಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕೇರಳ ಸಿಎಂಗೆ ಪತ್ರ ಬರೆದರೆ ಸಾಲದು. ರಾಜ್ಯ ಸರ್ಕಾರ ವೇಣುಗೋಪಾಲ್ಗೆ ಕಿವಿ ಹಿಂಡಬೇಕು. ಮಲೆಯಾಳಂ ಭಾಷೆ ಕಡ್ಡಾಯ ಮಾಡದಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದರು.
ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದನದಲ್ಲಿ ಚರ್ಚೆ ಮಾಡದೇ ಬಿಲ್ ಅಂಗೀಕಾರ ಮಾಡಿದ್ದರು. ಸರ್ಕಾರ ಹಿಂಬಾಗಿಲ ಮೂಲಕ ಮಸೂದೆ ಅಂಗೀಕಾರ ಮಾಡಿಕೊಂಡಿತ್ತು. ಯಾವುದೇ ಚರ್ಚೆಗೆ ಅವಕಾಶ ನೀಡಿರಲಿಲ್ಲ. ಈ ಮಸೂದೆ ಬಗ್ಗೆ ಸಾಕಷ್ಟು ಆಕ್ಷೇಪವಿದೆ. ಮಸೂದೆ ಮೂಲಕ ತುರ್ತು ಪರಿಸ್ಥಿತಿ ಹೇರಲು ಹೊರಟಿದ್ದಾರೆ. ರಾಜ್ಯದ ಪ್ರತಿಯೊಬ್ಬರು ಈ ಮಸೂದೆಯನ್ನು ವಿರೋಧ ಮಾಡುತ್ತಿದ್ದಾರೆ. ಈ ಕಾರಣಕ್ಕೆ ರಾಜ್ಯಪಾಲರು ತಡೆ ಹಿಡಿದಿರಬಹುದು ಎಂದು ಹೇಳಿದರು.





