ಬೆಳಗಾವಿ: ಕೆಎನ್ ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣದ ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗಡೆ ಬರಲೇಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಗಾಗ ಸಿಡಿ ಸದ್ದು ಆಗುತ್ತಿರುತ್ತದೆ. ಆದರೆ, ಯಾವುದೇ ತನಿಖೆಯೂ ತಾರ್ಕಿಕವಾಗಿ ಅಂತ್ಯವಾಗಿಲ್ಲ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದರು.
ಸಹೋದರ ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಹೀಗೆ ಆಯ್ತು. ತನಿಖೆ ಆಯಿತು, ಆದರೆ ಮಾಡಿದವರು ಯಾರು ಅಂತ ಆಚೆ ಬರಲಿಲ್ಲ ಎಂದು ತಿಳಿಸಿದರು.
ದೂರು ನೀಡಿದರೆ ಗೃಹ ಸಚಿವರು ತನಿಖೆ ಮಾಡುವುದಾಗಿ ಹೇಳಿದ್ದಾರೆ. ರಾಜಕಾರಣಿಗಳ ಹೆಸರಿನಲ್ಲಿ ಈ ರೀತಿಯ ಕೆಲಸ ಬೇಡ. ಬೇಕಾದರೆ ಹೋರಾಟ ಮಾಡಿ ಆದರೆ ಇಂತ ಹೀನ ಕೃತ್ಯ ಮಾಡಿಸಿ ಬಲಿಪಶು ಮಾಡಿಸಬೇಡಿ ಎಂದರು.
ಈ ಗಂಭಿರ ಸಮಸ್ಯೆಯಲ್ಲಿ ಸ್ವಪಕ್ಷೀಯದವರೇ ಇರಬಹುದು ಅಥವಾ ಬೇರೆ ಪಕ್ಷದವರೇ ಇರಬಹುದು. ಕಾಂಗ್ರೆಸ್ ಹೈಕಮಾಂಡ್ ಈ ವಿಚಾರಾವಾಗಿ ವರದಿ ತರಿಸಿಕೊಂಡು ತನಿಖೆ ನಡೆಸಲು ಸಮ್ಮತಿ ನೀಡಬೇಕು ಎಂದು ಹೇಳಿದರು.





