ಚಿತ್ರದುರ್ಗ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದೆಲ್ಲವೂ ನಗರ ನಕ್ಸಲರ ಕೈವಾಡ. ಷಡ್ಯಂತ್ರದ ಹಿಂದಿರುವವರು ಯಾರು ಎಂಬುದನ್ನು ಸರ್ಕಾರ ಬಹಿರಂಗ ಪಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಚಿತ್ರದುರ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರವಾಗಿ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಯಾರು ಷಡ್ಯಂತ್ರ ನಡೆಸಿದವರು ಎಂಬುದನ್ನು ಬಹಿರಂಗಪಡಿಸಬೇಕು. ಮೊದಲು ಎಸ್ಐಟಿ ಅಧಿಕಾರಿಗಳು ಮಧ್ಯಂತರ ವರದಿ ಬಿಡುಗಡೆ ಮಾಡಲಿ ಎಂದರು.
ಎಲ್ಲಾ ಷಡ್ಯಂತ್ರಗಳ ಹಿಂದೆ ನಗರ ನಕ್ಸಲರು ಇದ್ದಾರೆ. ನಗರ ನಕ್ಸಲರು ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತುವರೆದು ಈ ತನಿಖೆ ನಡೆಸಿದ್ದಾರೆ. ಮುಸುಕುಧಾರಿ ದೂರುದಾರ ಸರ್ಕಾರಕ್ಕೆ ಮುಸುಕು ಹಾಕಿದ್ದಾನೆ. ಬೆಟ್ಟ ಅಗೆದರೂ ಇಲಿಯೂ ಸಿಗಲಿಲ್ಲ. ಮುಸುಕುಧಾರಿ ಇನ್ನೂ ನೂರು ಕಡೆ ತೋರಿಸಲು ಹೊರಟಿದ್ದಾನೆ. ಕಡೆಗೆ ಮಂಜುನಾಥನ ಕೆಳಗೆ ಹೂತಿದ್ದೇನೆ ಎನ್ನವಂಥದ್ದೂ ನಡೆಯುತ್ತಿದೆ. ಹಿಂದೂಗಳನ್ನು ಇಷ್ಟೊಂದು ಕಡೆಗಣಿಸುವುದಾ? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು





