ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಸದನದಿಂದ ಆರು ತಿಂಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಆದೇಶವನ್ನು ವಾಪಾಸ್ ಪಡೆಯಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.22) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವುದು ಕಾನೂನು ಬಾಹಿರವಾಗಿದೆ. ಯಾವ ಕಾರಣಕ್ಕಾಗ ಸ್ಪೀಕರ್ ಅವರು ಅಮಾನತು ಮಾಡುವ ತೀರ್ಮಾನ ತೆಗೆದುಕೊಂಡರು? ಅವರ ಈ ನಿರ್ಧಾರ ಅಸಂವಿಧಾನತ್ಮಕ, ಏಕಪಕ್ಷೀಯ ಮತ್ತು ಮನಸೋ ಇಚ್ಛೆಯಿಂದ ತೆಗೆದುಕೊಂಡ ತೀರ್ಮಾನದಂತಿದೆ ಎಂದು ಕಿಡಿಕಾರಿದರು.
ಅಮಾನತುಗೊಂಡಿರುವ ಶಾಸಕರೇನು ಭಯೋತ್ಪಾದಕರಾ ಅಥವಾ ನಕ್ಸಲರಾ? ಇತಿಹಾಸದಲ್ಲಿ ಇಷ್ಟು ಸುದೀರ್ಘವಾಗಿ ಅಮಾನತು ಮಾಡಿರುವ ಉದಾಹರಣೆಗಳು ಇಲ್ಲ. ಆದರೆ ಸ್ಪೀಕರ್ ಆರು ತಿಂಗಳ ಕಾಲ ನಮ್ಮ 18 ಶಾಸಕರನ್ನು ಅಮಾನತು ಮಾಡಿದ್ದಾರೆ. ನಾವು ವಿರೋಧ ಪಕ್ಷದವರಾಗಿ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರದ ಸಂವಿಧಾನ ವಿರೋಧ ನಡೆಯನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದೇವು ಎಂದು ಹೇಳಿದರು.





