Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕಬ್ಬು ಬೆಳೆಗಾರರ ಬಂಧನ ಖಂಡಿಸಿ ಪ್ರತಿಭಟನೆ

ಮೈಸೂರು: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತು ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಭಾನುವಾರ ನಗರದ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಹಾಗೂ ರೈತರು, ಕಬ್ಬು ಬೆಳೆಗಾರರ ಸಂಘದ ಮುಖಂಡರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಕಳೆದ ೫ ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿಯನ್ನು ನಡೆಯುತ್ತಿತ್ತು. ಆದರೆ, ಸರ್ಕಾರ ಪೊಲೀಸರ ಮೂಲಕ ಧರಣಿಯನ್ನು ಹತ್ತಿಕ್ಕಿ ರಾಜ್ಯಾಧ್ಯಕ್ಷರು ಮತ್ತು ರೈತ ಮುಖಂಡರನ್ನು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಪ್ರತಿ ಟನ್ ಕಬ್ಬಿಗೆ ೩೦೫೦ ಎಫ್.ಆರ್.ಪಿ ದರವನ್ನು ನಿಗದಿ ಮಾಡಿದೆ. ಇದು ಅವೈಜ್ಞಾನಿಕ ಬೆಲೆ ಎಂದು ಖಂಡಿಸಿ ಬೆಂಗಳೂರನಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿತ್ತು. ಆದರೆ, ಸರ್ಕಾರ ಪೊಲೀಸ್ ಬಲವನ್ನು ಬಳಸಿ ಧರಣಿ ನಿರತರನ್ನು ಬಂಧಿಸುವುದರ ಮೂಲಕ ರಾಜ್ಯದ ರೈತಾಪಿ ವರ್ಗಕ್ಕೆ ಅಪಮಾನ ಮಾಡಿದೆ ಎಂದರು.
ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಪ್ರತಿ ಕ್ವಿಂಟಾಲ್‌ಗೆ ೫೦೦ ರೂ. ಪ್ರೋತ್ಸಾಹ ಧನವನ್ನು ನೀಡುವುದರ ಮೂಲಕ ಉಳಿದ ಜಿಲ್ಲೆಯ ಭತ್ತ ಬೆಳೆಗಾರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಲಕ್ಷ್ಮೀಪುರ ವೆಂಕಟೇಶ್, ಕಾಟೂರು ಮಹದೇವಸ್ವಾಮಿ, ವರಕೋಡು ನಾಗೇಶ್, ಜಯರಾಮ್, ಬಸವರಾಜ್ ಸಾತಗಳ್ಳಿ, ರಾಜೇಶ್ ಹಂಪಾಪುರ, ದೇವಮಣಿ, ವಾಜಮಂಗಲ ಮಹದೇವು, ಜಯರಾಮು ಮುಂತಾದವರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!