ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶುಚಿ ಯೋಜನೆಗೆ ಗ್ರಹಣ ಹಿಡಿದಿರುವಂತೆ ಕಾಣುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಶುಚಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಆದರೆ ಇದು ಕೇವಲ ಹೆಸರಿಗಷ್ಟೆ ಯೋಜನೆ ಇದೆ ಹೊರತು ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ.
ಸರ್ಕಾರಿ ಹಾಗೂ ಅನುದಾನಿತ ಕಾಲೇಜು ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸಲಾಗುತ್ತಿತ್ತು. ಆದರೆ ಕೊರೋನಾ ಬಂದಂತಹ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನ ಸ್ಥಗಿತಗೊಳಿಸಲಾಯಿತು.
ಬಳಿಕ ಫೆಬ್ರವರಿ ತಿಂಗಳಿನಿಂದ ಯೋಜನೆ ಪುನರಾರಂಭಗೊಳಿಸಿದ್ರೂ ಕೂಡ ರಾಜ್ಯ ವೈದ್ಯಕೀಯ ಸರಬರಾಜು ನಿಮಮದ ವತಿಯಿಂದ ವಿದ್ಯಾರ್ಥಿನಿಯರ ಕೈಗೆ ಸ್ಯಾನಿಟರಿ ಪ್ಯಾಡ್ ಮಾತ್ರ ಸಿಗುತ್ತಿಲ್ಲ. ಚುನಾವಣೆ ನೆಪವೊಡ್ಡಿ ಕಳೆದ 4 ತಿಂಗಳಿನಿಂದ ಈ ಯೋಜನೆ ಹಳ್ಳ ಹಿಡಿದೇ ಕೂತಿದ್ದು, ಸ್ಯಾನಿಟರಿ ಪ್ಯಾಡ್ ಸಿಗದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಸಾಕಷ್ಟು ಪರದಾಟ ನಡೆಸುತ್ತಿದ್ದಾರೆ.
ಈಗಾಗಲೇ ಎಲ್ಲೆಡೆ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು, ಇನ್ನಾದ್ರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿನಿಯರಿಗೆ ಶುಚಿ ಸ್ಯಾನಿಟರಿ ಪ್ಯಾಡ್ ವಿತರಿಸುವ ವ್ಯವಸ್ಥೆ ಮಾಡುತ್ತಾರಾ ಎಂಬುವುದನ್ನ ಕಾದಷ್ಟೆ ನೋಡಬೇಕಿದೆ.





