ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ತಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, 6ನೇ ಹಂತದ ಕಾವೇರಿ ನೀರು ಪೂರೈಕೆಗೆ ಶೀಘ್ರವೆ ಸಚಿವ ಸಂಪುಟದಿಂದ ಒಪ್ಪಿಗೆ ಕೊಡಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಾವು ಬೆಂಗಳೂರು ಅಭಿವೃದ್ಧಿ ಸಚಿವರಾದ ಬಳಿಕ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿಗೆ ದಿನೇ ದಿನೇ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡುತ್ತಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಈಗಾಗಲೇ ಕಾವೇರಿಯ 5ನೇ ಹಂತವನ್ನು ಜಾರಿಗೊಳಿಸಲಾಗಿದೆ.
ಬಹುತೇಕ ಎಲ್ಲಾ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಕಾವೇರಿ ನೀರು ಪೂರೈಕೆಯ 6ನೇ ಹಂತದ ಪ್ರಸ್ತಾವನೆಯೂ ಸರ್ಕರದ ಮುಂದಿದೆ. ಅದಕ್ಕೂ ಶೀಘ್ರವೇ ಸಂಪುಟದಲ್ಲಿ ಅನುಮೋದನೆ ಕೊಡಿಸಲಾಗುವುದು ಎಂದರು.
ಜಲಮಂಡಳಿಯಿಂದ ನೆನೆಗುದಿಗೆ ಬಿದ್ದಿರುವ ನೀರು ಪೂರೈಕೆ ಸಂಪರ್ಕಗಳನ್ನು ಮರು ಸಕ್ರಿಯೆಗೊಳಿಸಲು ಬಡ್ಡಿ ಮನ್ನಾದೊಂದಿಗೆ ಏಕಕಂತು ತಿರುವಳಿ ಯೋಜನೆಯನ್ನು ಯುಗಾದಿ ಹಬ್ಬದ ಕೊಡುಗೆಯಾಗಿ ನಾಗರಿಕರಿಗೆ ನೀಡಲಾಗಿದೆ. ಅಸಲು ಪಾವತಿಸಿ ಬಡ್ಡಿ ಮನ್ನಾ ಸೌಲಭ್ಯಗಳೊಂದಿಗೆ ನಾಗರಿಕರು ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿದರು.





