Mysore
20
overcast clouds
Light
Dark

ಖಾಸಗಿ ಶಾಲೆಗಳಿಗೂ ನಾಡಗೀತೆ ಕಡ್ಡಾಯ: ಸರ್ಕಾರ

ಮೈಸೂರು: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎಂದು ಹೊರಡಿಸಿರುವ ಸರ್ಕಾರದ ಆದೇಶ ಖಾಸಗಿ ಶಾಲೆಗಳಿಗೂ ಸಹ ಅನ್ವಯಿಸಲಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟೀಕರಣ ನೀಡಿದೆ.

ದಿವಂಗರ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡುಗಳ ಕಾಲ ನಾಡಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್‌ 25ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರ ಪೀಠಕ್ಕೆ ಸರ್ಕಾರಿ ವಕೀಲರು ಸ್ಪಷ್ಟನೆ ನೀಡಿದರು.

ಸರ್ಕಾರದ ಸ್ಪಷ್ಟೀಕರಣ ಆಲಿಸಿ ಪ್ರತಿಕ್ರಿಯಿಸಿದ ನ್ಯಾಯಾಪೀಠ ನಾಡಗೀತೆಯನ್ನು ನಿರ್ದಿಷ್ಟ ರಾಗದಲ್ಲಿ ಹಾಡುವುದನ್ನು ಕಡ್ಡಾಯ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನವಿಲ್ಲ ಎಂದು ಅರ್ಜಿದಾರರು ಅಪೇಕ್ಷಿಸಿದ್ದಾರೆ. ಹಾಗಾದರೆ ಇಂತಹ ಆದೇಶ ಹೊರಡಿಸಲು ಸರ್ಕಾರ ಯಾವ ಶಾಸನಾತ್ಮಕ ಅಧಿಕಾರ ಹೊಂದಿದೆ ಎಂದು ಪ್ರಶ್ನಿಸಿತು. ಇದಕ್ಕುತ್ತರಿಸಿದ ಸರ್ಕಾರದ ಪರ ವಕೀಲರು ಈ ಕುರಿತು ರಾಜ್ಯ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ಭರವಸೆ ನೀಡಿದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಹೈಕೋರ್ಟ್‌ ನಾಡಗೀತೆ ಸಾಂವಿಧಾನಿಕವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಾಡಗೀತೆ ವಿಚಾರದಲ್ಲಿ ರಾಜ್ಯ ಸರ್ಕಾರವೇಕೆ ಗೊಂದಲದ ಆದೇಶಗಳನ್ನು ಹೊರಡಿಸುತ್ತಿದೆ? ಒಂದು ಆದೇಶವನ್ನು ಹೊರಡಿಸಿದ ನಂತರ ಅದನ್ನು ಹಿಂಪಡೆದು ತಿದ್ದುಪಡಿ ಆದೇಶವನ್ನು ಹೊರಡಿಸುತ್ತಿದೆ. ಇನ್ನು ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನದ ಅಥವಾ ಇತರೆ ಶಾಸನದ ಬೆಂಬಲವಿರಬೇಕು. ಸರ್ಕಾರ ವಿವೇಚನಾಧಿಕಾರ ಬಳಸಿ ಕಾರ್ಯಕಾರಿ ಆದೇಶ ಹೊರಡಿಸಲಾಗದು. ಈ ಬಗ್ಗೆ ಸಮಗ್ರವಾದ ವಿವರಣೆ ನೀಡಿ ಎಂದು ಸೂಚಿಸಿ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು.

Tags: