ಬೆಂಗಳೂರು: ಇಲ್ಲಿನ ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಾತಿ ನಿಂದನೆ, ಜೀವ ಬೆದರಿಕೆ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಮುನಿರತ್ನ ಅವರನ್ನು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದರು.
ಸಿ.ಐ.ಡಿ. ಆರ್ಥಿಕ ಅಪರಾಧ ವಿಭಾಗದ ಅಪರ ಪೊಲೀಸ್ ಮಹಾ ನಿರ್ದೇಶಕ( ಎಡಿಜಿಪಿ)ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ ಐಟಿಯನ್ನು ಸರ್ಕಾರ ರಚಿಸಿದೆ. ಮುನಿರತ್ನ ವಿರುದ್ಧ ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಕ್ರಿಮಿನಲ್ ಪ್ರಕರಣ ಮತ್ತು ರಾಮನಗರ ಜಿಲ್ಲೆಯ ಕಗ್ಗಲೀಪುರದಲ್ಲಿ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಐಡಿಯ ವಿಶೇಷ ಎಸ್ಐಟಿ ತಂಡಕ್ಕೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ಎಸ್ ಐ ಟಿ ತಂಡದ ಪಟ್ಟಿ ಹೀಗಿದೆ…
ಬಿಕೆ ಸಿಂಗ್ : ( ಅಪರ ಪೊಲೀಸ್ ಮಹಾ ನಿರ್ದೇಶಕರು, ಆರ್ಥಿಕ ಅಪರಾಧಗಳು ಸಿಐಡಿ) ಎಸ್ ಐ ಟಿ ಮುಖ್ಯಸ್ಥರು
ಲಭುರಾಮ್ : ಐಪಿಎಸ್ ( ಪೊಲೀಸ್ ಮಹಾ ನಿರ್ದೇಶಕರು ಕೆಂದ್ರ ವಲಯ) ಸದಸ್ಯರು
ಸೌಮ್ಯಲತಾ : ಐಪಿಎಸ್ ( ಪೊಲೀಸ್ ಅಧೀಕ್ಷಕರು ರೈಲ್ವೇಸ್) ಸದಸ್ಯರು
ಸಿ.ಎ ಸೈಮನ್ (ಪೊಲೀಸ್ ಅಧೀಕ್ಷಕರು )ಸದಸ್ಯರು
ಏನಿದು ಮುನಿರತ್ನ ಪ್ರಕರಣ?
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ನಡುವೆ ಹನಿಟ್ರ್ಯಾಪ್ ಆರೋಪವೂ ಅವರ ವಿರುದ್ಧ ಕೇಳಿ ಬರುತ್ತಿದೆ. ಹನಿಟ್ರ್ಯಾಪ್ ಮಾಡಲು ಎಚ್ಐವಿ ಪೀಡಿತರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇದೆ. ಹಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಈ ಮೂಲಕ ಖೆಡ್ಡಾಗೆ ಕೆಡವಿದ್ದರು ಎಂಬ ಆರೋಪ ಕೇಳಿ ಬಂದಿದೆ.