Mysore
24
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಸಿದ್ದರಾಮಯ್ಯ ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡ್ತಿದ್ದಾರೆ : ಕುಮಾರಸ್ವಾಮಿ ಆರೋಪ

ಬೆಂಗಳೂರು: ಜಾತಿ ಗಣತಿ ವರದಿ ಇಟ್ಟುಕೊಂಡು ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡುತ್ತಾರಂತೆ. ಇದು ಕೇವಲ ಎರಡು ಸಮುದಾಯಗಳ ಪ್ರಶ್ನೆ ಅಲ್ಲ. ಇಷ್ಟು ದಿನ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಶೋಷಿತ ಸಮುದಾಯಗಳಿಗೆ ಏನು ಮಾಡಿದ್ದಾರೆ ಎನ್ನುವುದನ್ನು ಹೇಳಬೇಕು ಎಂದು ಒತ್ತಾಯ ಮಾಡಿದರು.

ಯಾವ ಯಾವ ಜಾತಿಯಲ್ಲಿ ಎಷ್ಟು ಜನ ಇದ್ದಾರೆ ಎನುವುದಕ್ಕಿಂತ ಎಷ್ಟು ಜನ ಬಡವರು ಇದ್ದಾರೆ ಎಂಬುದನ್ನು ಗಮನಿಸಬೇಕು. ಇಷ್ಟು ದಿನ ಸರ್ಕಾರದ ಸೌಲಭ್ಯಗಳು ಯಾರಿಗೆ ಸಿಕ್ಕಿವೆ, ಯಾರಿಗೆ ಸಿಕ್ಕಿಲ್ಲ ಎಂಬುದರ ಮೇಲೆ ಸರ್ಕಾರ ಬೆಳಕು ಚೆಲ್ಲಬೇಕು ಎಂದು ಹೇಳಿದರು.

ಇನ್ನೂ ಸಾಕ್ಷ್ಯ ಬೇಕೆ?
60% ಕಮಿಷನ್ ಬಗ್ಗೆ ಮುಖ್ಯಮಂತ್ರಿಗಳು ದಾಖಲೆ ಕೊಡಿ ಎಂದು ನನಗೆ ಹೇಳಿದ್ದರು. ಗುತ್ತಿಗೆದಾರರ ಸಂಘದ ಹಂಗಾಮಿ ಅಧ್ಯಕ್ಷರು ಎಷ್ಟೆಷ್ಟು ಪರ್ಸೆಂಟೇಜ್ ಎಂದು ಅವರೇ ಪಟ್ಟಿ ಮಾಡಿ ಹೇಳಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ ಎಂದು ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಸಚಿವ ಪ್ರಿಯಾಂಕ ಖರ್ಗೆ ಮತ್ತು ಕಿಯೋನಿಕ್ಸ್ ಅಧ್ಯಕ್ಷರಿಗೆ ಹೇಳುವುದು ಇಷ್ಟೇ; ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಿ. ತಪ್ಪು ಮಾಡದವರಿಗೆ ಶಿಕ್ಷೆ ಯಾಕೆ? ಅವರ ಹಣ ಪಾವತಿ ಮಾಡಿ. ಅಂತಹವರ ಬದು ಏನಾಗಬೇಕು ಎಂಬ ಬಗ್ಗೆ ಒಮ್ಮೆ ಯೋಚನೆ ಮಾಡಿ. ಜನಪ್ರತಿನಿಧಿಗಳು ಸುಳ್ಳು ವ್ಯವಹಾರ ಮಾಡಿದ್ದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳಿ. ತನಿಖೆ ನಡೆಸಿ ವಾಸ್ತಾವಂಶ ಹೊರಕ್ಕೆ ತರಲು ಎಷ್ಟು ತಿಂಗಳು ಬೇಕು ನಿಮಗೆ? ಈ ರಾಜ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ತೆರಿಗೆ ಸಂಗ್ರಹದಲ್ಲಿ ಸರ್ಕಾರ ಹಿಂದೆ ಬಿದ್ದಿದೆ
ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತೀರಿ. ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುತ್ತೀರಿ. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎನ್ನುತ್ತೀರಿ. ನಿಮ್ಮ ಯಾವ ಕೆಲಸದಲ್ಲಿಯೂ ದಕ್ಷತೆ ಕಾಣುತ್ತಿಲ್ಲ. ನಿರೀಕ್ಷೆಗೆ ತಕ್ಕಂತೆ ತೆರಿಗೆ ಸಂಗ್ರಹ ಆಗುತ್ತಿಲ್ಲ. ಬಜೆಟ್ ಮಂಡನೆಗೆ ತಯಾರಿ ಮಾಡುತ್ತಿದ್ದೀರಿ, ಆದರೆ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದ್ದೀರಿ. ಎಲ್ಲಾ ಬಾಬ್ತುಗಳಿಂದ ಸುಮಾರು ₹62,424 ಕೋಟಿಯಷ್ಟು ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಮೇಲಿಂದ ಮೇಲೆ ಸಾಲ ಮಾಡುತ್ತಿದ್ದೀರಿ. ಪೆಟ್ರೋಲ್, ಡೀಸೆಲ್, ಮುದ್ರಾಂಕ, ಮಾರ್ಗದರ್ಶಿ ಶುಲ್ಕ, ವಿದ್ಯುತ್ ದರ, ಬಸ್ ಪ್ರಯಾಣ ದರ, ಮದ್ಯದ ದರ ಸೇರಿದಂತೆ ಎಲ್ಲವನ್ನೂ ಏರಿಕೆ ಮಾಡಿದ್ದೀರಿ. ಇಷ್ಟೆಲ್ಲಾ ಮಾಡಿದರೂ ನಿಮ್ಮ ತೆರಿಗೆ ಸಂಗ್ರಹದಲ್ಲಿ ಕೊರತೆ ಆಗಿದೆ. ನಿಮ್ಮ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Tags:
error: Content is protected !!