Mysore
21
scattered clouds

Social Media

ಮಂಗಳವಾರ, 07 ಏಪ್ರಿಲ 2026
Light
Dark

ಕೊವಿಡ್‌ ತಜ್ಞರ ಜತೆ ಸಿಎಂ ಸಭೆ; ಇಲ್ಲಿವೆ ಪ್ರಮುಖ ಅಂಶಗಳು

ನೆರೆಯ ಕೇರಳದಲ್ಲಿ ಕೊವಿಡ್‌ ಮತ್ತೆ ಹೆಚ್ಚಾಗುತ್ತಿದ್ದು ಕರ್ನಾಟಕ ಸರ್ಕಾರ ಅಲರ್ಟ್‌ ಆಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಕೊವಿಡ್‌ ತಜ್ಞರ ಜತೆ ಸಭೆ ನಡೆಸಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ 92 ಸಕ್ರಿಯ ಪ್ರಕರಣಗಳು ಇವೆ, ಬೆಂಗಳೂರು ಒಂದರಲ್ಲಿಯೇ 80 ಮಂದಿಗೆ ಪಾಸಿಟಿವ್‌ ಆಗಿದೆ, ಮೈಸೂರಿನಲ್ಲಿ ಐವರು ಹಾಗೂ ಬಳ್ಳಾರಿಯಲ್ಲಿ ಮೂವರಿಗೆ ಕೊವಿಡ್‌ ಬಂದಿದೆ ಎಂದ ಸಿದ್ದರಾಮಯ್ಯ 72 ಸೋಂಕಿತರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಲಾಗಿದ್ದು, 20 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಸಹ ಮಾಹಿತಿ ಹಂಚಿಕೊಂಡರು. ಇನ್ನು ರಾಜ್ಯದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಇವರು ಕೊರೊನಾದಿಂದಲೇ ಸಾವನ್ನಪ್ಪಿದರು ಎಂದು ಹೇಳಲಾಗುವುದಿಲ್ಲ, ಅವರು ಕಿಡ್ನಿ, ಶ್ವಾಸಕೋಶ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು, ರಾಜ್ಯದಲ್ಲಿ ಪ್ರತಿನಿತ್ಯ 5000 ಟೆಸ್ಟ್‌ಗಳನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿಕೆ ನೀಡಿದರು.

ಇನ್ನು ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ 60 ವರ್ಷ ಮೇಲ್ಪಟ್ಟವರು ಮಾಸ್ಕ್‌ ಹಾಕಿಕೊಳ್ಳಬೇಕು, ಚಿಕ್ಕ ಮಕ್ಕಳು ಮಾಸ್ಕ್‌ ಹಾಕಿಕೊಂಡರೆ ಒಳ್ಳೆಯದೇ ಅಲ್ವಾ ಎಂದರು. ಹೊಸವರ್ಷ ಹಾಗೂ ಕ್ರಿಸ್‌ಮಸ್‌ಗೆ ಯಾವುದೇ ನಿರ್ಬಂಧ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವ ಸಿದ್ದರಾಮಯ್ಯ ಹೊಸವರ್ಷದ ಸಂಭ್ರಮಕ್ಕೆ ಹೆಚ್ಚು ಜನ ಸೇರುತ್ತಾರೆ, ಅಂತಹ ಜಾಗಗಳಲ್ಲಿ ಮಾಸ್ಕ್‌ ಹಾಕಿಕೊಳ್ಳಬೇಕು, ಮಾಸ್ಕ್‌ ಕಡ್ಡಾಯ ಅಲ್ಲ, ಸಲಹೆ ಅಷ್ಟೇ ಎಂದರು.

ಅತ್ತ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಕಳೆದ ಬಾರಿಯ ರೀತಿ ಈ ಬಾರಿ ಸಮಸ್ಯೆಗಳು ಆಗಬಾರದು, ಬೆಡ್‌, ಆಕ್ಸಿಜನ್‌ ಹಾಗೂ ಅಗತ್ಯವಾದ ಸಲಕರಣೆಗಳನ್ನು ಸಿದ್ದಪಡಿಸಿಕೊಳ್ಳಿ, ಅಗತ್ಯವಿದ್ದರೆ ವಾಕ್ಸಿನೇಷನ್‌ ಸಹ ಆರಂಭಿಸಬೇಕು ಎಂದರು. ಕೇಂದ್ರ ಸರ್ಕಾರಕ್ಕೆ ಕಾಯುತ್ತಾ ಕೂರುವ ಅಗತ್ಯವಿಲ್ಲ, ನಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂದೂ ಸಹ ಸಿಎಂ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!