ಬೆಂಗಳೂರು: ವಿಶ್ವದ ನಾಯಕರು ಕೋರಿಕೆ ಇಟ್ಟಾಗ ನಾವು ಅದನ್ನು ಪಾಲಿಸಬೇಕಾಗುತ್ತದೆ ಎಂದು ಕದನ ವಿರಾಮದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವಿಶ್ವದ ಜೊತೆ ಹೋಗುತ್ತಿದ್ದೇವೆ, ವಿಶ್ವದ ಮಾತು ಕೇಳಿದ್ದೇವೆ. ಆದರೆ ಪಾಕಿಸ್ತಾನ ಕೇಳಿಲ್ಲ ಎಂದರು.
ಪಾಕಿಸ್ತಾನದ ನಡೆಯನ್ನು ಇಡೀ ವಿಶ್ವವೇ ನೋಡಿದೆ. ಈಗ ವಿಶ್ವವೇ ಯೋಚಿಸಬೇಕು. ನಾವು ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ವಿ. ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಮ್ಮ ಸೈನಿಕರು ಸರ್ವನಾಶ ಮಾಡಿದ್ದಾರೆ. ನಮ್ಮ ಪ್ರತೀಕಾರವನ್ನು ನಾವು ಗಡಿಯಲ್ಲಿ ತೋರಿಸುತ್ತಲೇ ಬಂದಿದ್ದೇವೆ ಎಂದು ಹೇಳಿದರು.
ನಮ್ಮ ದಾಳಿಗೆ ಹೆದರಿ ಪಾಕಿಸ್ತಾನವು ಅಮೇರಿಕಾ ಹಾಗೂ ಬೇರೆ ಬೇರೆ ದೇಶಗಳ ಕಾಲು ಹಿಡಿದುಕೊಂಡು, ಈ ಯುದ್ಧ ನಿಲ್ಲಿಸಬೇಕು. ಯುದ್ಧ ಮುಂದುವರಿಸುವ ಶಕ್ತಿ ನಮಗಿಲ್ಲ ಎಂದು ಕೇಳಿಕೊಂಡಿತ್ತು. ಅಮೇರಿಕಾ ಮಧ್ಯಸ್ಥಿಕೆ ಮೂಲಕ ಕದನ ವಿರಾಮ ನಂತರವು ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ. ನಾವು ದೇಶಕ್ಕಾಗಿ ನಡಿಗೆ ಮಾಡಿದ್ದೇವೆ. ನಮ್ಮ ಸೈನಿಕ ಪರ ಇಡೀ ದೇಶವೇ ನಿಂತಿದೆ. ತಿನ್ನೋಕೆ, ಕುಡಿಯೋಕೆ ಇಲ್ಲದ ದೇಶ ಪಾಕಿಸ್ತಾನ ನಿರಂತರ ತೊಂದರೆ ಕೊಡುತ್ತಿದೆ ಇದು ನಿಲ್ಲಬೇಕು ಎಂದು ಹೇಳಿದರು.





