ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಚರ್ಚೆಯ ವಿಚಾರವಾಗಿದೆ. ಈ ವಿಚಾರದಲ್ಲಿ ಸಾಹಿತಿ ಎಸ್.ಎಸ್.ಭೈರಪ್ಪ ನೀಡಿರುವ ಹೇಳಿಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಭೈರಪ್ಪ ಅವರು ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಈ ಬಗ್ಗೆ ಕಿಡಿಕಾರಿರುವ ರಮೇಶ್ ಬಾಬು ಎಂಬುವವರು, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಇದೆ. ಸಾಹಿತಿ ಭೈರಪ್ಪ ಅವರು ತಮ್ಮ ಎಂದಿನ ಚಾಳಿಯಂತೆ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಆಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಅವರು ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿರುತ್ತದೆ. ಋಣ ಸಂದಾಯದ ಕಾರಣಕ್ಕಾಗಿ ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಸಾಹಿತಿ ಭೈರಪ್ಪ ವಿರುದ್ಧ ಕಿಡಿಕಾರಿದ್ದಾರೆ.